
ಕರಾವಳಿ ಸಿನಿಮಾ ಟ್ರೈಲರ್ ಗಲಾಟೆ ಪ್ರಕರಣ; ಪ್ರಜ್ವಲ್ ದೇವರಾಜ್ ಅವರ ಸಹಾಯಕರ ವಿರುದ್ಧ ದೂರು ದಾಖಲು, ಪೊಲೀಸರಿಂದ ಎಫ್ಐಆರ್..!
Karavali Movie Trailer Controversy: ‘ಕರಾವಳಿ’ ಸಿನಿಮಾದ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಈ ಈವೆಂಟ್ ಹಲವು ಡ್ರಾಮಾಗಳಿಗೆ ಸಾಕ್ಷಿ ಆಯಿತು. ಪ್ರಜ್ವಲ್ ಅಭಿಮಾನಿಗಳು ಗಲಾಟೆ ಮಾಡಿದ್ದರು. ಈ ಗಲಾಟೆ ಪ್ರಕರಣ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಉದ್ದೇಶಪೂರ್ವಕವಾಗಿ ಗುಂಪು ಕಟ್ಟಿಕೊಂಡು ಬಂದು ನಿರ್ದೇಶಕ ಹಾಗೂ ನಿರ್ಮಾಪಕರಿಗೆ ಬೆದರಿಕೆ ಹಾಕಿದ ಆರೋಪದ ಮೇಲೆ ಬೆಂಗಳೂರಿನ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಜ್ವಲ್ ಆಪ್ತರ ವಿರುದ್ಧ ಎಫ್ಐಆರ್ ದಾಖಲಾಗಿದೆ.ಬಾಕಿ ಸಂಭಾವನೆ ವಿಚಾರವಾಗಿ ನಟನ ಪ್ರಚೋದನೆಯಿಂದಲೇ ಈ ರಾದ್ಧಾಂತ ನಡೆದಿದೆ ಎಂದು ಆರೋಪಿಸಲಾಗಿದ್ದು, ಉಪ್ಪಾರಪೇಟೆ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.

ಆರಂಭದಲ್ಲಿ, ಗಲಾಟೆ ಮಾಡಿದವರು ನಟ ಪ್ರಜ್ವಲ್ ದೇವರಾಜ್ ಅವರ ಅಭಿಮಾನಿಗಳು ಎಂದು ಹೇಳಲಾಗಿತ್ತು. ಆದರೆ, ಈಗ ಅಚ್ಚರಿಯ ಸತ್ಯವೊಂದು ಬಯಲಾಗಿದೆ. ಗಲಾಟೆ ಮಾಡಿದ ದಿಲೀಪ್, ಅವಿನಾಶ್ ಮತ್ತು ನಂದಕುಮಾರ್ ಕೇವಲ ಅಭಿಮಾನಿಗಳಲ್ಲ, ಬದಲಾಗಿ ಅವರು ಪ್ರಜ್ವಲ್ ದೇವರಾಜ್ ಅವರ ಜೊತೆಯಲ್ಲೇ ಕೆಲಸ ಮಾಡುವ ಸಹಾಯಕರು ಎಂಬುದು ಪತ್ತೆಯಾಗಿದೆ. ಇವರು ‘ಕರಾವಳಿ’ ಸಿನಿಮಾದ ಶೂಟಿಂಗ್ ಸಮಯದಲ್ಲೂ ಪ್ರಜ್ವಲ್ ಅವರಿಗೆ ಸಹಾಯಕರಾಗಿ ಕೆಲಸ ಮಾಡಿದ್ದರು ಎನ್ನಲಾಗಿದೆ.
