BlogEntertainmentLatestTop Stories

ಅಪ್ಪು ಆಗಲಿ ಇಂದಿಗೆ 3 ವರ್ಷ, ಸಮಾಧಿಗೆ ಕುಟುಂಬಸ್ಥರು ಮತ್ತು ಅಭಿಮಾನಿಗಳಿಂದ ಪೂಜೆ

ಬೆಂಗಳೂರು : ಅಕ್ಟೋಬರ್‌ 29 ಕನ್ನಡ ಚಿತ್ರರಂಗದ ಪಾಲಿಗೆ ಕರಾಳ ದಿನ. 3 ವರ್ಷಗಳ ಹಿಂದೆ ಇದೇ ದಿನ ಪುನೀತ್‌ ರಾಜ್‌ಕುಮಾರ್‌ ಅಭಿಮಾನಿಗಳನ್ನು ಬಿಟ್ಟು ಹೋದರು. ಪುನೀತ್‌ ರಾಜ್‌ಕುಮಾರ್‌ ನಿಧನರಾಗಿ 3 ವರ್ಷಗಳು ಕಳೆದಿವೆ.

ಕಂಠೀರವ ಸ್ಟುಡಿಯೋನಲ್ಲಿ ಪುನೀತ್ ಸಮಾಧಿಗೆ ಇಂದು ವಿಶೇಷ ಪೂಜೆ ಮಾಡಲಾಯ್ತು. ರಾಘವೇಂದ್ರ ರಾಜ್​ಕುಮಾರ್ ಕುಟುಂಬ ಹಾಗೂ ಅಶ್ವಿನಿ ಪುನೀತ್ ರಾಜ್​ಕುಮಾರ್ ಅವರುಗಳು ಆಗಮಿಸಿ ಪೂಜೆ ನೆರವೇರಿಸಿದರು. ಅಪ್ಪು ಸಮಾಧಿಯನ್ನು ಹೂಗಳಿಂದ ಅಲಂಕರಿಸಲಾಗಿತ್ತು . ಬಂದ ಅಭಿಮಾನಿಗಳಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು.

ಶಿವರಾಜ್ ಕುಮಾರ್ ಹಾಗೂ ಕುಟುಂಬದವರು ಬೆಳಿಗ್ಗೆ ಆಗಮಿಸಿರಲಿಲ್ಲ. ಆದರೆ ಸಂಜೆ ವೇಳೆಗೆ ಶಿವಣ್ಣ, ಗೀತಾ ಶಿವರಾಜ್ ಕುಮಾರ್ ಮತ್ತು ಅವರ ಪುತ್ರಿ ಆಗಮಿಸಿ ಪೂಜೆ ಮಾಡಿದರು. ಪುನೀತ್ ಸಮಾಧಿಗೆ ಬೆಳಿಗಿನಿಂದಲೂ ಅಭಿಮಾನಿಗಳು ಭೇಟಿ ನೀಡಿ ಪೂಜೆ ಮಾಡಿ ಕೈಮುಗಿಯುತ್ತಿದ್ದಾರೆ.

ಚಿತ್ರರಂಗಕ್ಕೆ ಬರುವ ನವ ನಟರಿಗೆಲ್ಲಾ ಬೆನ್ನು ತಟ್ಟುತ್ತಿದ್ದ ದೊಡ್ಮನೆಯ ಕುಡಿ, ಪುನೀತ್ ರಾಜ್ಕುಮಾರ್ ಇನ್ನಿಲ್ಲ ಎಂಬ ಸುದ್ದಿಯನ್ನು ಇವತ್ತಿಗೂ ಅರಗಿಸಿಕೊಳ್ಳಲು ಕಷ್ಟವಾಗುತ್ತಿದೆ. ಈ ಕಷ್ಟದಲ್ಲೇ ಪುನೀತ್ ರಾಜ್ಕುಮಾರ್ ನಮ್ಮನ್ನಗಲಿ ಇಂದಿಗೆ (ಅಕ್ಟೋ ಬರ್ 29ಕ್ಕೆ) ಮೂರು ವರ್ಷವಾಗುತ್ತದೆ. ಆದರೆ, ಈ ಮೂರು ವರ್ಷದಲ್ಲಿ ಕರುನಾಡು ಪುನೀತ್ ರಾಜ್ಕುಮಾರ್ ಅವರನ್ನು ನೆನೆಯದ ದಿನವಿಲ್ಲ. ಅವರ ಅಭಿಮಾನಿಗಳು ನೋವಿನಲ್ಲೇ ದಿನ ದೂಡುತ್ತಿದ್ದಾರೆ.

2021 ಅ.29ರಂದು ಅಪ್ಪು ಅಕಾಲಿಕವಾಗಿ ಅಗಲಿದ್ದರು. ಇಂದಿಗೆ ಅವರಿಲ್ಲದೆ ಮೂರು ವರ್ಷಗಳು ಕಳೆದಿವೆ. ಪುಣ್ಯಸ್ಮರಣೆ ಅಂಗವಾಗಿ ಇಂದು ಸಮಾಧಿಗೆ ವಿಶೇಷವಾಗಿ ಹೂವಿನ ಅಲಂಕಾರ ಮಾಡಲಾಗಿತ್ತು. ನೆಚ್ಚಿನ ನಟನ ದರ್ಶನ ಪಡೆಯಲು ಜನಸಾಗರವೇ ಹರಿದು ಬಂತು.

ಅಪ್ಪು ನಮ್ಮ ನಡುವೆಯೇ ಇದ್ದಾನೆ, ಎಲ್ಲೂ ಹೋಗಿಲ್ಲ: ಶಿವರಾಜ್ ಕುಮಾರ್
ಅಪ್ಪು ನಮ್ಮ ನಡುವೆಯೇ ಇದ್ದಾನೆ, ಎಲ್ಲೂ ಹೋಗಿಲ್ಲ ಎಂದು ನಟ ಶಿವರಾಜ್ ಕುಮಾರ್ ಹೇಳಿದ್ದಾರೆ. ಪುನೀತ್ ರಾಜ್‌ಕುಮಾರ್ ಅವರು ನಿಧನರಾಗಿ 3 ವರ್ಷಗಳಾಗಿವೆ. ಅಪ್ಪು 3ನೇ ಪುಣ್ಯಸ್ಮರಣೆಯಂದುಸ್ಮಾರಕಕ್ಕೆ ಶಿವಣ್ಣ ಕುಟುಂಬ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ಮಾಧ್ಯಮಕ್ಕೆ ಶಿವಣ್ಣ ಮಾತನಾಡಿ, ಅಪ್ಪು ನಮ್ಮಲ್ಲಿ ಒಬ್ಬರಾಗಿ ಜೀವಿಸುತ್ತಿದ್ದಾರೆ ಎಂದು ಶಿವಣ್ಣ ಮಾತನಾಡಿದ್ದಾರೆ.

ಅಪ್ಪುನ ಅಷ್ಟು ಬೇಗ ಮರೆಯೋಕೆ ಆಗಲ್ಲ. ಶೂಟಿಂಗ್ ಹೋದರೂ ಎಲ್ಲೇ ಇದ್ದರೂ ಪುನೀತ್ ನೆನಪಾಗುತ್ತಲೇ ಇರುತ್ತಾನೆ. ಅಪ್ಪು ನಮ್ಮ ನಡುವೆಯೇ ಇದ್ದಾನೆ, ಎಲ್ಲೂ ಹೋಗಿಲ್ಲ. ನಮ್ಮಲ್ಲಿ ಒಬ್ಬರಾಗಿ ಜೀವಿಸುತ್ತಿದ್ದಾರೆ. ನಾನು ಈ ಜಾಗಕ್ಕೆ ಬರಬೇಕು ಅಂತ ಏನೂ ಇಲ್ಲ. ಈ ಜಾಗದಲ್ಲಿ ಒಂದು ಪಾಸಿಟಿವ್ ವೈಬ್ ಇದೆ ಎಂದಿದ್ದಾರೆ.

ಅಪ್ಪುನ ಕಳೆದುಕೊಂಡ ನೋವು ಇದ್ದೆ ಇದೆ. ಪ್ರತಿಯೊಂದು ಕಾರ್ಯಕ್ರಮದಲ್ಲೂ ಅವನನ್ನು ನೆನಪಿಸಿಕೊಳ್ಳುತ್ತೇವೆ. ಚಿತ್ರರಂಗಕ್ಕೆ ಬರುವ ಹೊಸ ಕಲಾವಿದರಲ್ಲಿ ಅಪ್ಪುನ ನೋಡ್ತೀನಿ ಎಂದಿದ್ದಾರೆ. ಅಭಿಮಾನಿಗಳು ತೋರಿಸುವ ಪ್ರೀತಿಗೆ ಬೆಲೆ ಕಟ್ಟೋಕೆ ಆಗಲ್ಲ ಎಂದು ಶಿವಣ್ಣ ಎಂದಿದ್ದಾರೆ.

Share with Friends
author avatar
News Desk