
ಹುಬ್ಬಳ್ಳಿ ಚಲಿಸುತ್ತಿದ್ದ ಬಸ್ನಲ್ಲೇ ಕಂಡಕ್ಟರ್ಗೆ ಹೃದಯಾಘಾತ..!
ಹುಬ್ಬಳ್ಳಿ: ಕರ್ತವ್ಯದಲ್ಲಿದ್ದಾಗಲೇ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ (NWKRTC) ಬಸ್ ನಿರ್ವಾಹಕರೊಬ್ಬರಿಗೆ ಚಲಿಸುತ್ತಿದ್ದ ಬಸ್ನಲ್ಲೇ ತೀವ್ರ ಹೃದಯಾಘಾತವಾಗಿ ಮೃತಪಟ್ಟಿರುವ ದಾರುಣ ಘಟನೆ ಹುಬ್ಬಳ್ಳಿ ಸಮೀಪ ನಡೆದಿದೆ.
ಬಾಗಲಕೋಟೆ ಜಿಲ್ಲೆಯ ಅಮೀನಗಡ ನಿವಾಸಿಯಾದ ಅಯ್ಯಪ್ಪ ಬೆನ್ನೂರು (51) ಮೃತಪಟ್ಟ ದುರ್ದೈವಿ ನಿರ್ವಾಹಕರಾಗಿದ್ದಾರೆ.
ಕೂಡಲಸಂಗಮದಿಂದ ಮಂಗಳೂರಿಗೆ ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಬಸ್ ನಿನ್ನೆ ಹುಬ್ಬಳ್ಳಿ ಸಮೀಪ ತಲುಪಿದಾಗ, ನಿರ್ವಾಹಕ ಅಯ್ಯಪ್ಪ ಬೆನ್ನೂರು ಅವರಿಗೆ ಇದ್ದಕ್ಕಿದ್ದಂತೆ ಎದೆನೋವು ಕಾಣಿಸಿಕೊಂಡು ಹೃದಯಾಘಾತವಾಗಿದೆ.
ಸಹೋದ್ಯೋಗಿಯ ಪ್ರಾಣಾಪಾಯವನ್ನು ಅರಿತ ಬಸ್ ಚಾಲಕ ಸಮಯಪ್ರಜ್ಞೆ ಮೆರೆದಿದ್ದಾರೆ. ತಡಮಾಡದೇ ಬಸ್ ಅನ್ನು ನೇರವಾಗಿ ಹುಬ್ಬಳ್ಳಿಯ ಕಿಮ್ಸ್ (KIMS) ಆಸ್ಪತ್ರೆಯ ಆವರಣಕ್ಕೇ ಚಲಾಯಿಸಿಕೊಂಡು ಬಂದು ದಾಖಲಿಸಿದ್ದಾರೆ. ನಿರ್ವಾಹಕನ ಪ್ರಾಣ ಉಳಿಸಲು ಚಾಲಕ ಕೊನೆಯ ಕ್ಷಣದವರೆಗೂ ಶಕ್ತಿಮೀರಿ ಪ್ರಯತ್ನ ನಡೆಸಿದ್ದರೂ ಸಹ, ಚಿಕಿತ್ಸೆ ಫಲಕಾರಿಯಾಗದೇ ಅಯ್ಯಪ್ಪ ಬೆನ್ನೂರು ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ.
