
ಗುರು ಪೌರ್ಣಿಮೆ: ಸಾಯಿಬಾಬಾ ಮಂದಿರದಲ್ಲಿ ವಿಶೇಷ ಪೂಜೆ, ಭಕ್ತರಿಂದ ಗುರು ವಂದನೆ..!
ರಾಯಚೂರು: ಗುರು ಪೌರ್ಣಿಮೆಯ ಹಿನ್ನೆಲೆಯಲ್ಲಿ ನಾಡಿನೆಲ್ಲೆಡೆ ಭಕ್ತಿ ಭಾವ ಮನೆ ಮಾಡಿದ್ದು, ರಾಯಚೂರು ನಗರದ ಸಾಯಿಬಾಬಾ ಮಂದಿರದಲ್ಲಿ ವಿಶೇಷ ಪೂಜೆ ಪುನಸ್ಕಾರಗಳು ನಡೆದವು.
ಬೆಳಗ್ಗೆಯಿಂದಲೇ ಸಾಯಿ ಮಂದಿರದ ಆವರಣದಲ್ಲಿ ಭಕ್ತರು ಗುರುಸ್ಮರಣೆ ಮಾಡಿದರು. ಸಾಯಿಬಾಬಾ ಅವರ ಭಾವಚಿತ್ರಕ್ಕೆ ವಿಶೇಷ ಅಲಂಕಾರ ಮಾಡಿ, ಪೂಜೆ ಹಾಗೂ ಭಜನೆಗಳೊಂದಿಗೆ ದಿನವಿಡೀ ಕಾರ್ಯಕ್ರಮಗಳು ಜರುಗಿದವು.

ಈ ಬಾರಿಯ ವಿಶೇಷ ಆಕರ್ಷಣೆಯಾಗಿ ಸಾಯಿ ಬಾಬಾ ಅವರು ಧರಿಸಿದ್ದ ಕಾಫ್ನಿಯನ್ನು ಭಕ್ತರ ದರ್ಶನಕ್ಕಾಗಿ ಇಡಲಾಗಿತ್ತು. ಕಾಫ್ನಿಯನ್ನು ಕಂಡ ಭಕ್ತರು ಭಕ್ತಿಯಿಂದ ನಮಸ್ಕರಿಸಿ ಪುನೀತರಾದರು.
ದೇವಸ್ಥಾನ ಹಾಗೂ ಸುತ್ತಮುತ್ತಲ ಆವರಣವನ್ನು ಕಣ್ಮನ ಸೆಳೆಯುವ ವಿದ್ಯುತ್ ದೀಪಾಲಂಕಾರದಿಂದ ಸಿಂಗರಿಸಲಾಗಿತ್ತು. ಸಂಜೆವರೆಗೂ ಸರದಿ ಸಾಲಿನಲ್ಲಿ ನಿಂತು ಸಾಯಿಬಾಬಾ ದರ್ಶನ ಪಡೆದ ಭಕ್ತರು ಗುರುವಿಗೆ ನಮನ ಸಲ್ಲಿಸಿದರು.
ಗುರು ಪೌರ್ಣಿಮೆ ಪ್ರಯುಕ್ತ ಮಂದಿರದಲ್ಲಿ ಅನ್ನದಾನ ಹಾಗೂ ಪ್ರಸಾದ ವಿತರಣೆ ಕೂಡ ಮಾಡಲಾಯಿತು. ಭಕ್ತರ ಅನುಕೂಲಕ್ಕಾಗಿ ವಿಶೇಷ ಭದ್ರತಾ ವ್ಯವಸ್ಥೆಯನ್ನು ಕೂಡ ಮಾಡಲಾಗಿತ್ತು.
