BlogTop Storiesರಾಷ್ಟ್ರೀಯ-National

ಅ.1ರ ವರೆಗೆ ಬುಲ್ಡೋಜರ್‌ ಕಾರ್ಯಾಚರಣೆಗೆ ಬ್ರೇಕ್ ಹಾಕಿದ ಸುಪ್ರೀಂ

ನವದೆಹಲಿ: ಬುಲ್ಡೋಜರ್‌ ಕಾರ್ಯಾಚರಣೆ ಕ್ರಮವನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿದೆ. ಈ ಕ್ರಮ ಅದ್ಭುತ ಎಂದು ವೈಭವೀಕರಿಸುವವರ ವಿರುದ್ಧ ಕೋರ್ಟ್‌ ಎಚ್ಚರಿಕೆ ಸಂದೇಶ ರವಾನಿಸಿದೆ. ನ್ಯಾಯಾಲಯದ ಅನುಮತಿ ಇಲ್ಲದೇ ಮುಂದಿನ ದಿನಾಂಕದ ವರೆಗೆ ಯಾವುದೇ ಕಾರ್ಯಾಚರಣೆ ನಡೆಸದಂತೆ ಸೂಚಿಸಿದೆ.

ದೇಶದಲ್ಲಿ ಅಕ್ಟೋಬರ್‌ 1 ರ ವರೆಗೆ ಬುಲ್ಡೋಜರ್‌ ಕಾರ್ಯಾಚರಣೆಗೆ ಸುಪ್ರೀಂ ಕೋರ್ಟ್‌ ತಡೆ ನೀಡಿದೆ. ಮುಂದಿನ ವಾದಗಳನ್ನು ಆಲಿಸುವ ವರೆಗೆ ದೇಶದ ಯಾವುದೇ ಸ್ಥಳದಲ್ಲಿ ಖಾಸಗಿ ಆಸ್ತಿಯ ವಿರುದ್ಧ ಅನಧಿಕೃತ ಬುಲ್ಡೋಜರ್‌ ಕ್ರಮ ಬೇಡ ಎಂದು ಕೋರ್ಟ್‌ ಸೂಚಿಸಿದೆ.

ನ್ಯಾಯಮೂರ್ತಿ ಬಿ.ಆರ್.ಗವಾಯಿ ಮತ್ತು ಕೆ.ವಿ.ವಿಶ್ವನಾಥನ್ ಅವರಿದ್ದ ಪೀಠ ವಿಚಾರಣೆ ನಡೆಸಿತು. ‘ಬುಲ್ಡೋಜರ್‌ ಕಾರ್ಯಾಚರಣೆ’ಯು ಸರಿಯಾದ ಪ್ರಕ್ರಿಯೆಗಳ ನಂತರ ನೆಲಸಮಕ್ಕೆ ಮಂಜೂರು ಮಾಡುವಂತಹ ಕ್ರಮಗಳ ಮೇಲೆ ಪರಿಣಾಮ ಬೀರುತ್ತದೆ. ಮುಂದಿನ ವಿಚಾರಣೆಯ ತನಕ ನಿಮ್ಮ ಕೈಗಳನ್ನು ನಿಯಂತ್ರಿಸಿ. ಇದರಿಂದ ಸ್ವರ್ಗವೇ ಧರೆಗೆ ಬೀಳುವುದಿಲ್ಲ ಎಂದು ನ್ಯಾಯಾಲಯ ಚಾಟಿ ಬೀಸಿದೆ. ಸರ್ಕಾರದ ಪರ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ವಾದಿಸಿದರು.

ಇದೇ ವೇಳೆ, ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಿ ಅಥವಾ ಶಿಕ್ಷೆಗೊಳಗಾದ ವ್ಯಕ್ತಿಗಳಿಗೆ ಸೇರಿದ ಮನೆಗಳು ಮತ್ತು ವಾಣಿಜ್ಯ ಆಸ್ತಿಗಳ ಬುಲ್ಡೋಜಿಂಗ್ ವಿರುದ್ಧದ ಅರ್ಜಿಗಳನ್ನು ನ್ಯಾಯಾಲಯ ಆಲಿಸಿತು. ರಸ್ತೆಗಳು, ರೈಲ್ವೆ ಹಳಿಗಳು ಮತ್ತು ಜಲಮೂಲಗಳಂತಹ ಸಾರ್ವಜನಿಕ ಸ್ಥಳಗಳಲ್ಲಿನ ಅತಿಕ್ರಮಣಗಳನ್ನು ತೆರವುಗೊಳಿಸಲು ಈ ಆದೇಶ ಅನ್ವಯಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

Share with Friends
author avatar
News Desk