
ಉತ್ತರ ಭಾರತದಲ್ಲಿ ಮಳೆಗೆ 10 ಮಂದಿ ಬಲಿ
ನವದೆಹಲಿ, ಜು.10- ದೇಶದಲ್ಲಿ ನೈರುತ್ಯ ಮುಂಗಾರು ತೀವ್ರಗೊಂಡಿದ್ದು ಉತ್ತರ ಭಾರತದ ಹಲವೆಡೆ ಮಳೆ ಮುಂದುವರಿದ ಕಾರಣ ಮಳೆ ಸಂಬಂಧಿ ಘಟನೆಗಳಿಂದ 10 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು ಉತ್ತರಾಖಂಡದಲ್ಲಿ ಭೂಕುಸಿತ, ಉತ್ತರ ಪ್ರದೇಶ, ಹಿಮಾಚಲ ಪ್ರದೇಶಗಳಲ್ಲಿ ನದಿಗಳು ಉಕ್ಕಿ ಹರಿಯುತ್ತಿದ್ದು ಜನ ಜೀವನ ಸಮಸ್ಯೆಗೆ ಅಸ್ತವ್ಯಸ್ಥಗೊಂಡಿದೆ.

ಭಾರಿ ಮಳೆಯಿಂದ ಹಲವು ರಾಜ್ಯಗಳಲ್ಲಿ ರಸ್ತೆಗಳು ಜಲಾವೃತಗೊಂಡಿವೆ, ಭೂಕುಸಿತಗಳು ಸಂಭವಿಸಿವೆ ಮತ್ತು ಶಾಲಾ ಕಾಲೇಜಿಗೆ ರಜೆ ನೀಡಲಾಗಿದೆ. ನದಿಗಳು ಉಕ್ಕಿ ಹರಿಯುತ್ತಿವೆ, ಹೆದ್ದಾರಿ ಸಂಚಾರ ಬಂದ್ ಮಾಡಲಾಗಿದೆ. ಇದರಿಂದ ಮತ್ತು ಸಾರಿಗೆ ವ್ಯವಸ್ಥೆ ಏರುಪೇರಾಗಿದೆ.
ಮುಂಬರುವ ದಿನಗಳಲ್ಲಿ ದೇಶದ ಹೆಚ್ಚಿನ ಭಾಗಗಳಲ್ಲಿ ಮುಂಗಾರು ಮತ್ತಷ್ಟು ಸಕ್ರಿಯವಾಗಲಿದ್ದು ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ವಿವಿಧ ರಾಜ್ಯಗಳಲ್ಲಿ ಮಳೆ ಸಂಬಂಧಿತ ಘಟನೆಗಳಲ್ಲಿ ಹೊಸದಾಗಿ ೧೦ ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.ಕಳೆದ ಕೆಲವು ದಿನಗಳಿಂದ ಗುಜರಾತ್ನ ಸೂರತ್ ಜಿಲ್ಲೆಯಲ್ಲಿ ಮಾತ್ರ ಹೆಚ್ಚು ಮಂದಿ ಮಳೆ ಸಂಬಂಧಿತ ಸಾವನ್ನಪ್ಪಿದ್ದರು.
ಉತ್ತರಾಖಂಡದ ಕೆಲವು ಸ್ಥಳಗಳಲ್ಲಿ ಭಾರೀ ಮಳೆಯಾಗಿರುವ ಹಿನ್ನೆಲೆಯಲ್ಲಿ ಅಲಕನಂದಾ ಮತ್ತು ಮಂದಾಕಿನಿ ನದಿಗಳು ಉಕ್ಕಿ ಹರಿಯುತ್ತಿದ್ದು, ರುದ್ರಪ್ರಯಾಗ ಜಿಲ್ಲೆಯ ಶಾಲೆಗಳಿಗೆ ರಜೆ ಘೋಷಿಸಲಾಗಿದ್ದು, ಅಧಿಕಾರಿಗಳು ನದಿ ನೀರಿನ ಮಟ್ಟವನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ.
ಉತ್ತರಕಾಶಿ ಜಿಲ್ಲೆಯ ನಲು ಪಾನಿಯಲ್ಲಿ ಭೂಕುಸಿತ ಸಂಭವಿಸಿ ಗಂಗೋತ್ರಿ ಹೆದ್ದಾರಿಯಲ್ಲಿ ಸಂಚಾರ ಸ್ಥಗಿತಗೊಂಡ ನಂತರ ಚಾರ್ ಧಾಮ್ ಯಾತ್ರೆಗೆ ಅಡ್ಡಿಯುಂಟಾಗಿದೆ.ರಸ್ತೆ ತೆರವುಗೊಳಿಸುವ ತಂಡಗಳನ್ನು ನಿಯೋಜಿಸಲಾಗಿದ್ದು, ಪುನಃಸ್ಥಾಪನೆ ಕಾರ್ಯ ನಡೆಯುತ್ತಿದೆ.

ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, 75 ರಸ್ತೆಗಳು ಮುಚ್ಚಿಹೋಗಿದ್ದು, 29 ವಿದ್ಯುತ್ ಪರಿವರ್ತಕಗಳು ಮತ್ತು ಐದು ನೀರು ಸರಬರಾಜು ಯೋಜನೆಗಳು ಹಾನಿಗೊಳಗಾಗಿವೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ.
ಶಿಮ್ಲಾ ಮತ್ತು ಸಿರ್ಮೌರ್ ಜಿಲ್ಲೆಗಳಲ್ಲಿ ಶುಕ್ರವಾರ ಹೆಚ್ಚಿನ ಮಳೆಯಾಗುವ ನಿರೀಕ್ಷೆಯಿದೆ.. ಪಶ್ಚಿಮ ಉತ್ತರ ಪ್ರದೇಶದ ಕೆಲವು ಭಾಗಗಳಿಗೆ ರೆಡ್ ಅಲರ್ಟ್ ಘೋಷಿಸಿದ್ದು,ಭಾರೀ ಅಥವಾ ಅತಿ ಹೆಚ್ಚು ಮಳೆಯಾಗುವ ಎಚ್ಚರಿಕೆ ನೀಡಿದೆ. ನಾಳೆವರೆಗೂ ರಾಜ್ಯಾದ್ಯಂತ ಮಳೆ ಮುಂದುವರಿಯುವ ನಿರೀಕ್ಷೆಯಿದ್ದು, ತಾಪಮಾನವು 2-4 ಡಿಗ್ರಿ ಸೆಲ್ಸಿಯಸ್ ಕಡಿಮೆಯಾಗುವ ಸಾಧ್ಯತೆಯಿದೆ.
ಮುನ್ನೆಚ್ಚರಿಕೆ ಕ್ರಮವಾಗಿ ಗಾಜಿಯಾಬಾದ್, ಮೀರತ್, ಹಾಪುರ್, ಬುಲಂದ್ಶಹರ್, ಬಾಗ್ಪತ್, ಮುಜಫರ್ನಗರ, ಬಿಜ್ನೋರ್, ಸಹರಾನ್ಪುರ ಮತ್ತು ಮೊರಾದಾಬಾದ್ ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ಪ್ರಯಾಗ್ರಾಜ್ನಲ್ಲಿ ನಿರಂತರ ಮಳೆಯಿಂದಾಗಿ ನದಿಗಳ ಮಟ್ಟ ಏರುತ್ತಿರುವುದರಿಂದ ಅಧಿಕಾರಿಗಳು ಪ್ರವಾಹ ಸಿದ್ಧತೆ ಕಾರ್ಯ ತೀವ್ರಗೊಳಿಸಿದ್ದಾರೆ. ಕೆಲವು ನದಿಗಳು ಅಪಾಯದ ಮಟ್ಟವನ್ನು ಸಮೀಪಿಸುತ್ತಿವೆ, ಆದರೆ ಸಾಮಾನ್ಯವಾಗಿ ಪ್ರವಾಹಕ್ಕೆ ಕಾರಣವಾಗುವ ನದಿಗಳು ಗಂಭೀರ ಮಟ್ಟಕ್ಕಿಂತ ಕೆಳಗಿವೆ ಎಂದು ಜಿಲ್ಲಾಧಿಕಾರಿ ಮನೀಶ್ ಕುಮಾರ್ ವರ್ಮಾ ಹೇಳಿದ್ದಾರೆ.
