
ಹುಡುಗಿಯರ ಹಿಂದೆ ಬಿದ್ದ ಪಿಎಸ್ಐ, ಕೊಲೆ ಯತ್ನಕ್ಕೂ ಹಿಂಜರಿಯದ ಕ್ರೂರ!
ಬೆಂಗಳೂರು (ಜು.14): ಸಮಾಜಕ್ಕೆ ಭದ್ರತೆ ನೀಡಬೇಕಾದ, ಜನಸಾಮಾನ್ಯರನ್ನು ರಕ್ಷಿಸಬೇಕಾದ ಖಾಕಿಧಾರಿಯೇ ಕ್ರೂರಿಯಾಗಿ ಬದಲಾದ ಘಟನೆಯೊಂದು ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಸರ್ಕಾರಿ ಕೆಲಸ, ಸಮಾಜದಲ್ಲಿ ಗೌರವಯುತ ಹುದ್ದೆ, ಎಲ್ಲವೂ ಇದ್ದರೂ, ಪಿಎಸ್ಐ ಭೈರಪ್ಪ ಎಂಬಾತ ತನ್ನ ಪತ್ನಿಯ ಜೀವವನ್ನೇ ತೆಗೆಯಲು ಸಂಚು ಹೂಡಿದ್ದಾನೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.ತನ್ನ ಹೆಂಡತಿಗೆ ನಿತ್ಯ 50 ಲಕ್ಷ ವರದಕ್ಷಿಣೆ ತರುವಂತೆ ಕಿರುಕುಳ ನೀಡಲು ಪ್ರಾರಂಭಿಸಿದ್ದಾನೆ.

ಪತಿಯ ಕಿರುಕುಳದಿಂದ ಬೇಸತ್ತ ಪತ್ನಿ, ತನ್ನ ತಂದೆಗೆ ತಿಳಿಸಿದ್ದಾಳೆ. ಈ ಹಿನ್ನೆಲೆಯಲ್ಲಿ, ಮಾವ ಮಧ್ಯಪ್ರವೇಶಿಸಿ ಅಳಿಯನಿಗೆ ಬುದ್ಧಿ ಹೇಳಲು ಯತ್ನಿಸಿದಾಗ, ಭೈರಪ್ಪ ಅವರು ಮಾವನ ಮೇಲೂ ಮಚ್ಚಿನಿಂದ ಹಲ್ಲೆ ಮಾಡಲು ಮುಂದಾಗಿದ್ದಾರೆ ಎಂದು ಪತ್ನಿ ಆರೋಪಿಸಿದ್ದಾರೆ. ಇದಷ್ಟೇ ಅಲ್ಲದೆ, ಭೈರಪ್ಪ ಅವರಿಗೆ ಮದುವೆಯಾಗಿದ್ದರೂ, ಮಗುವಿದ್ದರೂ ಯುವತಿಯರ ಹಿಂದೆ ಬೀಳುವ ಚಾಳಿಯೂ ಇತ್ತು ಎನ್ನಲಾಗಿದೆ. ಅವರ ಪೋಲಿ ಆಟಗಳು ಒಂದೊಂದಲ್ಲ, ಹಲವು ಯುವತಿಯರ ಜೊತೆ ಸಂಪರ್ಕ ಹೊಂದಿದ್ದರು ಎಂದು ಪತ್ನಿ ಹೇಳಿಕೊಂಡಿದ್ದಾರೆ.
ಭೈರಪ್ಪ ಅವರ ಅಧಿಕಾರ ದುರ್ಬಳಕೆ ಮತ್ತು ಕಾನೂನಿಗೆ ಸಡ್ಡು ಹೊಡೆಯುವ ಪ್ರವೃತ್ತಿಯೂ ಈ ಘಟನೆಯಲ್ಲಿ ಸ್ಪಷ್ಟವಾಗಿದೆ. ಒಬ್ಬ ಪಿಎಸ್ಐ ಆಗಿ, ಕಾನೂನನ್ನು ಗೌರವಿಸಬೇಕಾದ ಭೈರಪ್ಪ, ತಾನೇ ಕಾನೂನನ್ನು ಕೈಗೆತ್ತಿಕೊಂಡಿದ್ದಾನೆ. ತನ್ನ ಅಧಿಕಾರದ ಬಲದಿಂದ ಮಾವನ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದಾನೆ. ಈ ಘಟನೆ ಪೊಲೀಸ್ ಇಲಾಖೆಯ ಮೇಲೆಯೂ ಕೆಟ್ಟ ಪರಿಣಾಮ ಬೀರಿದೆ. ಇಂತಹ ವ್ಯಕ್ತಿಗಳಿಗೆ ಪೊಲೀಸ್ ಇಲಾಖೆಯಲ್ಲಿ ಅವಕಾಶ ನೀಡಬಾರದು ಎಂದು ಸಾಮಾಜಿಕ ಕಾರ್ಯಕರ್ತರು ಆಗ್ರಹಿಸಿದ್ದಾರೆ.
