
ಕಾವೇರಿ ಕಿಚ್ಚು : ಕೇಂದ್ರ ಸರ್ಕಾರ, ಸುಪ್ರೀಂ ಕೋರ್ಟ್ ಗೆ ಮನವರಿಕೆ ಮಾಡಿ ಕೊಡಿ
ಬೆಂಗಳೂರು,ಜ.30: ಕಾವೇರಿ ನದಿ ನೀರು ವಿಚಾರದಲ್ಲಿ ರಾಜ್ಯದ ರೈತರ ಹಿತ ಕಾಪಾಡಬೇಕು ಎಂದು ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಕೇವಲ ರಾಜಕೀಯ ಕಾಟಾಚಾರಕ್ಕೆ ಹೇಳಿಕೆ ಕೊಡುತ್ತಿರುವುದು ಸರಿಯಲ್ಲ. ಇಂತಹ ಪರಿಸ್ಥಿತಿಯಲ್ಲಿ ಕೇಂದ್ರ ಸರ್ಕಾರದ ಮನವೊಲಿಸಬೇಕು. ಸುಪ್ರೀಂ ಕೋರ್ಟ್ಗೂ ಮನವರಿಕೆ ಮಾಡಬೇಕು ಎಂದು ಸಲಹೆ ನೀಡಿದರು.
ಕಾವೇರಿ ನದಿ ನೀರು ವಿಚಾರ ಸಂಬಂಧ ಸೋಮವಾರ ತಮಿಳುನಾಡಿನ ಸಿಎಂ ವಿಜಯ್ ರಾಜ್ಯಕ್ಕೆ ಸೌಹಾರ್ದಯುತ ಭೇಟಿ ನೀಡಲು ಮನಸ್ಸು ಮಾಡಿರುವುದು ಸ್ವಾಗತಾರ್ಹ.ಆದರೆ ಸಿಎಂ ಡಿ.ಕೆ.ಶಿವಕುಮಾರ್ ಜೊತೆಗಿನ ಅವರ ಮಾತುಕತೆ ಎಷ್ಟು ಫಲಪ್ರದವಾಗುತ್ತೋ ಕಾದು ನೋಡಬೇಕು ಎಂದರು.
ತಮಿಳುನಾಡಿಗೆ ನೀರು ಹರಿಸುವ ವಿಚಾರದಲ್ಲಿ ಕಾವೇರಿ ನೀರು ನಿಯಂತ್ರಣ ಸಮಿತಿಯು ಮೊಂಡುತನ ಬಿಡಬೇಕು.ಜೊತೆಗೆ ರಾಜ್ಯದಲ್ಲಿ ಅಧ್ಯಯನ ನಡೆಸಲು ಸಮಿತಿಯೇ ಬರಬೇಕು ಎಂದ ಅವರು,ಮೇಕೇದಾಟಿಗೂ ತಮಿಳುನಾಡಿನ ಸಿಎಂ ವಿಜಯ್ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಕಿಡಿಕಾರಿದರು.
ಬಿಜೆಪಿ ಶಾಸಕ ಎಸ್.ಆರ್. ವಿಶ್ವನಾಥ್ ಮಾತನಾಡಿ, ಕಾವೇರಿ ನದಿ ನೀರು ವಿಚಾರದಲ್ಲಿ ರೈತರ ಆಕ್ರೋಶ ಸರಿಯಾಗಿದೆ.ಸರ್ಕಾರ ಸರಿಯಾದ ರೀತಿಯಲ್ಲಿ ಕ್ರಮ ತೆಗೆದುಕೊಳ್ಳದೆ ಇರುವ ಪರಿಣಾಮ ಸಮಿತಿ ನೀರು ಬಿಡುವಂತೆ ತೀರ್ಪು ನೀಡಿದೆ ಎಂದರು.
ಅಲ್ಲದೆ,ಕ್ಯಾಬಿನೆಟ್ ವಿಸ್ತರಣೆ ಮಧ್ಯೆದಲ್ಲೇ ಜೀವನದಿ ವಿಚಾರದಲ್ಲಿ ಅಸಡ್ಡೆ ತೋರಿದ್ದಾರೆ.ಇಲ್ಲಿ ಬೆಂಕಿ ಬಿದ್ದು ಹೊತ್ತಿ ಉರಿಯುತ್ತಿದ್ದರೂ ದೆಹಲಿಯಲ್ಲೇ ಅಧಿಕಾರ ದಾಹಕ್ಕಾಗಿ ಬೀಡು ಬಿಟ್ಟಿದ್ದಾರೆ.ಹೀಗಾಗಿ ಬಿಜೆಪಿ ಕೂಡ ಹೋರಾಟ ಮಾಡಬೇಕಾದ ಅನಿವಾರ್ಯತೆ ಇದೆ ಎಂದು ಕಿಡಿಕಾರಿದರು.
ಸಂಪುಟ ವಿಸ್ತರಣೆ ವಿಚಾರವಾಗಿ ಮಾತನಾಡಿ, ಬಹುಶಃ ಇನ್ನೂ ಸೆಟಲ್ ಮೆಂಟ್ ಆಗಿಲ್ಲ ಅಂತಾ ಕಾಣಿಸುತ್ತದೆ. ಅರ್ಧ ಗಂಟೆಯಲ್ಲಿ ಮುಗಿಯಬೇಕಾದ ವಿಚಾರ ಇದು. ಬಹುಶಃ ವ್ಯಾಪಾರ ಸರಿಯಾಗಿ ಆಗಿಲ್ಲ ಅಂತಾ ಕಾಣಿಸುತ್ತದೆ ಎಂದು ವ್ಯಂಗ್ಯವಾಡಿದರು.
