
ಬೀದರ್ ಜಿಲ್ಲೆಯಲ್ಲಿ ಬಿರುಗಾಳಿ ಸಹಿತ ಧಾರಾಕಾರ ಮಳೆ : ರೈತರ ಸಂತಸ
ಬೀದರ್,ಜು.30: ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದ್ದು,ಬೀದರ್, ಭಾಲ್ಕಿ, ಹುಮ್ನಾಬಾದ್, ಚಿಟಗುಪ್ಪ ಹಾಗೂ ಬಸವಕಲ್ಯಾಣ ಸೇರಿದಂತೆ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲೂ ಉತ್ತಮ ಮಳೆಯಾಗುತ್ತಿದೆ.
ಕಳೆದ ಎರಡು ದಿನಗಳಿಂದ ಸತತವಾಗಿ ಜಿಟಿಜಿಟಿ ಮಳೆಯಾಗುತ್ತಿದ್ದು, ಕೆಲವು ಕಡೆಗಳಲ್ಲಿ ಬಿರುಗಾಳಿ ಸಹಿತ ಭಾರೀ ಮಳೆಯಾಗಿದೆ.
ನಿನ್ನೆಯಿಂದ ಸುರಿಯುತ್ತಿರುವ ಮಳೆಯಿಂದಾಗಿ ಬೀದರ್ ನಗರ ಸೇರಿ ಇಡೀ ಜಿಲ್ಲೆಯಾದ್ಯಂತ ದಟ್ಟವಾದ ಮಂಜು ಮುಸುಕಿದ್ದು, ಗಡಿನಾಡು ಮಂಜಿನ ನಗರಿಯಂತೆ ಕಂಗೊಳಿಸುತ್ತಿದೆ.
2 ತಿಂಗಳಿನಿಂದ ಸೂಕ್ತ ಮಳೆಯಿಲ್ಲದೆ ಬಿತ್ತನೆ ಮಾಡಲು ಸಾಧ್ಯವಾಗದೆ ಕಾಯುತ್ತಿದ್ದ ಅನ್ನದಾತರಿಗೆ ಇದೀಗ ನಿರಂತರ ಮಳೆಯಿಂದ ಹೊಸ ಭರವಸೆ ಮೂಡಿದ್ದು,ಒಣಗುತ್ತಿದ್ದ ಜಮೀನುಗಳಿಗೆ ಜೀವಕಳೆ ಬಂದಂತಾಗಿ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.
