BlogLatestTop Storiesರಾಜ್ಯ-Karnataka

ಸಚಿವ ಸಂಪುಟ ಸಭೆಯ ತೀರ್ಮಾನಗಳು ಮತ್ತು ಹೈಲೈಟ್ಸ್

ಬೆಂಗಳೂರು: ಮೆ|| ಮೃಣಾಲ್ ಶುಗರ್ಸ್ ಲಿ., ಪುಡಕಲಕಟ್ಟಿ, ಧಾರವಾಡ ತಾಲ್ಲೂಕು, ಧಾರವಾಡ ಜಿಲ್ಲೆ ಈ ಸಕ್ಕರೆ ಕಾರ್ಖಾನೆಯಿಂದ 7.50 ಕಿ.ಮೀ ತ್ರಿಜ್ಯಾಕಾರದಲ್ಲಿರುವ ಗ್ರಾಮಗಳನ್ನು ಶ್ರೀ ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆ ನಿ., ಬೈಲಹೊಂಗಲ ತಾಲ್ಲೂಕು, ಬೆಳಗಾವಿ ಜಿಲ್ಲೆ ಇವರಿಂದ ಹಿಂಪಡೆಯುವುದು ಮತ್ತು ಮರುಹಂಚಿಕೆ ಮಾಡುವುದು ಸಮಂಜಸವಾಗಿರುತ್ತದೆ ಎಂದು ಪರಿಗಣಿಸಿ ಧಾರವಾಡ ಜಿಲ್ಲೆಯ 19 ಗ್ರಾಮಗಳನ್ನು ಕಬ್ಬು ಖರೀದಿಗಾಗಿ ಮರು ಹಂಚಿಕೆ ಮಾಡಿದೆ.
•19 ಗ್ರಾಮಗಳನ್ನು ಶ್ರೀ ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆಯಿಂದ ಹಿಂಪಡೆದು ಮೆ|| ಮೃಣಾಲ್ ಶುಗರ್ಸಗೆ ಮೀಸಲು ಕ್ಷೇತ್ರವನ್ನಾಗಿ ಹಂಚಿಕೆ ಮಾಡಲಾಗಿದೆ.
•ಪುಡಕಲಕಟ್ಟೆ, ಉಪ್ಪಿನ ಬೆಟಗೇರಿ, ಹನುಮನಾಳ, ಕಲ್ಲೆ, ಕಬ್ಬೇನೂರ, ಕರಡಿಗುಡ್ಡ, ತಿಮ್ಮಾಪೂರ, ಮರೇವಾಡ, ಅಮ್ಮಿನಭಾವಿ, ಹಾರೋಬೆಳವಡಿ, ಕಲ್ಲೂರ, ಲೋಕೂರ, ಶಿಬಾರಗಟ್ಟಿ, ಯಾದವಾಡ, ಮುಳಮುತ್ತಲ, ಮಂಗಳಗಟ್ಟಿ, ಲಕಮಾಪೂರ, ದಾಸನಕೊಪ್ಪ ಮತ್ತು ಕುರುಬಗಟ್ಟೆ ಒಟ್ಟು 11 ಗ್ರಾಮಗಳನ್ನು ಈ ಸಕ್ಕರೆ ಕಾರ್ಖಾನೆಗೆ ಸೇರ್ಪಡೆ ಮಾಡಿದೆ ಎಂದು ಕಾನೂನು, ಸಂಸದೀಯ ವ್ಯವಹಾರ ಸಚಿವ ಎಚ್.ಕೆ ಪಾಟೀಲ ರವರು ಸಚಿವ ಸಂಪುಟದ ಸಭೆಯ ನಂತರ ಸುದ್ದಿಗಾರರಿಗೆ ತಿಳಿಸಿದರು.

ಅನುಕಂಪದ ನೇಮಕಾತಿ
ದಿವಂಗತ ಡಾ. ದಿಲೀಪ್ ಆರ್, ಐಪಿಎಸ್ ಇವರ ಮಗಳಾದ ಕು|| ಅದಿತಿ ಡಿ, ಇವರಿಗೆ ಕರ್ನಾಟಕ ಸರ್ಕಾರ ಸಚಿವಾಲಯದಲ್ಲಿ ಸಹಾಯಕರ ಹುದ್ದೆಗೆ ಅನುಕಂಪದ ಆಧಾರದ ಮೇಲೆ ನೇಮಕಾತಿ ಮಾಡಲು ತೀರ್ಮಾನಿಸಿದರು ತೀರ್ಮಾನಿಸಿದೆ.

ಅಕ್ರಮ ಗಣಿಗಾರಿಕೆ ತನಿಖಾ ತಂಡದ ಅವಧಿ ವಿಸ್ತರಣೆ
ಗಣಿಗಾರಿಕೆಯಲ್ಲಿ ನಡೆದ ತನಿಖೆಗಾಗಿ ಸೃಜಿಸಲಾಗಿರುವ ಕರ್ನಾಟಕ ಲೋಕಾಯುಕ್ತದ ವಿಶೇಷ ತನಿಖಾ ತಂಡದ ಕಾರ್ಯಾವಧಿಯನ್ನು ಇನ್ನು ಒಂದು ವರ್ಷದ ಅವಧಿಗೆ ವಿಸ್ತರಿಸಲು ರಾಜ್ಯ ಸಚಿವ ಸಂಪುಟ ತೀರ್ಮಾನಿಸಿದೆ.

•113 ಕಬ್ಬಿಣ ಗಣಿ ರಫ್ತು ಪ್ರಕರಣಗಳು ವಿಚಾರಣೆಗೆ ಬಾಕಿ ಇವೆ.
•02 ಪ್ರಕರಣಗಳಿಗೆ ಮಾನ್ಯ ಉಚ್ಛ ನ್ಯಾಯಾಲಯದ ತಡೆಯಾಜ್ಞೆ ಇದೆ.
•08 ಪ್ರಕರಣಗಳಲ್ಲಿ ಸಿ.ಆರ್.ಪಿ.ಸಿ 173(8) ತನಿಖೆ ಬಾಕಿ ಇದ್ದು, ಅದಿರು ಮೌಲ್ಯಮಾಪನ ಸಮಿತಿಯ ವರದಿ ನಿರೀಕ್ಷಿಸಲಾಗಿದೆ.
•06 ಪ್ರಕರಣಗಳು ತನಿಖಾ ಹಂತದಲ್ಲಿವೆ.
ಈ ಹಿನ್ನೆಲೆಯಲ್ಲಿ ವಿಶೇಷ ತನಿಖಾ ತಂಡದ ಕಾರ್ಯಾವಧಿಯನ್ನು ವಿಸ್ತರಿಸುವುದು ಸೂಕ್ತವೆಂದು ಭಾವಿಸಲಾಗಿದೆ ಎಂದು ಸಚಿವರು ಸಚಿವ ಸಂಪುಟ ಸಭೆಯ ನಂತರ ಸುದ್ದಿಗಾರರಿಗೆ ತಿಳಿಸಿದರು.

ಅಭಿಯೋಜನೆಯಿಂದ ಹಿಂಪಡೆಯಲು ನಿರ್ಧಾರ
ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ 60 ಕ್ರಿಮಿನಲ್ ಮೊಕದ್ದಮೆಗಳನ್ನು ಅಭಿಯೋಜನೆಯಿಂದ ಹಿಂಪಡೆಯಲು ರಾಜ್ಯ ಸಚಿವ ಸಂಪುಟ ನಿರ್ಧರಿಸಿದೆ.
ಸಚಿವ ಸಂಪುಟದ ಉಪಸಮಿತಿ ದಿನಾಂಕ: 14.09.2023 ದಿನಾಂಕ: 28.12.2023 ಮತ್ತು ದಿನಾಂಕ: 05.09.2024 ರಂದು ನಡೆದ ಸಭೆಗಳಲ್ಲಿ ಅಭಿಯೋಜನೆಯಿಂದ ಹಿಂಪಡೆಯಲು ಶಿಫಾರಸ್ಸು ಮಾಡಿರುವ ಪ್ರಕರಣಗಳಲ್ಲಿ ಈ ಪ್ರಕರಣಗಳನ್ನು ಪುನರ್ ಪರಿಶೀಲಿಸಲು ಉಪ ಸಮಿತಿಗೆ ಕೋರಲಾಗಿತ್ತು.
ಅನುಬಂಧ-1 ರಲ್ಲಿ 43, ಅನುಬಂಧ-2 ರಲ್ಲಿ 15 ಮತ್ತು ಅನುಬಂಧ-3 ರಲ್ಲಿ 02 ಪ್ರಕರಣಗಳನ್ನು ಹಿಂಪಡೆಯಲು ಮಾನ್ಯ ಉಚ್ಛ ನ್ಯಾಯಾಲಯದ ಅನುಮತಿ ಪಡೆಯುವ ಸಂಬಂಧ ಕ್ರಮವಹಿಸಲು ಮಂಡಿಸಲಾಗಿತ್ತು ಎಂದು ಸಚಿವರು ವಿವರಿಸಿದರು.

ರೇಷ್ಮೆ ಭವನ ನಿರ್ಮಾಣಕ್ಕೆ ಅನುಮೋದನೆ
ಬೆಂಗಳೂರಿನ ಓಕಳಿಪುರಂನಲ್ಲಿ ರೇಷ್ಮೆ ಇಲಾಖೆಗೆ ಸೇರಿದ 4.25 ಎಕರೆ ಜಮೀನಿನಲ್ಲಿ ಕರ್ನಾಟಕ ರಾಜ್ಯ ಖನಿಜ ನಿಗಮ ನಿಯಮಿತ ಇವರಿಂದ ಸಂಪೂರ್ಣ ಬಂಡವಾಳ ಹೂಡಿಕೆಯೊಂದಿಗೆ ರೂ.527.50 ಕೋಟಿಗಳ ಅಂದಾಜು ಮೊತ್ತದಲ್ಲಿ “ರೇಷ್ಮೆ ಭವನ” ನಿರ್ಮಾಣ ಮಾಡಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
ರಾಷ್ಟ್ರೀಯ ರೇಷ್ಮೆ ಕೃಷಿ ನೀತಿಯಡಿ ಕೇಂದ್ರ ರೇಷ್ಮೆ ಮಂಡಳಿ ಮತ್ತು ರಾಜ್ಯ ರೇಷ್ಮೆ ಇಲಾಖೆಯ ಪರಸ್ಪರ ಒಪ್ಪಂದದೊಂದಿಗೆ ಸಂಪೂರ್ಣ ನಿರ್ಮಾಣ ವೆಚ್ಚವನ್ನು ಕೇಂದ್ರ ರೇಷ್ಮೆ ಮಂಡಳಿಯು ಭರಿಸಿದ್ದು, ಈ ಕಟ್ಟಡದಲ್ಲಿ ಎರಡೂ ಕಾರ್ಯಾಲಯಗಳು ಇರುತ್ತವೆ. ಹಾಲಿ ಇರುವ ಕಟ್ಟಡವನ್ನು ಕೆಡವಿ ನೂತನ ರೇಷ್ಮೆ ಭವನವನ್ನು ಕರ್ನಾಟಕ ರಾಜ್ಯ ಖನಿಜ ನಿಗಮ ನಿಯಮಿತ ವತಿಯಿಂದ ಸಂಪೂರ್ಣ ವೆಚ್ಚಭರಿಸಿ ನಿರ್ಮಾಣ ಮಾಡಲು ತೀರ್ಮಾನಿಸಲಾಗಿದೆ. 76465.26 ಚ.ಮೀ ವಿಸ್ತೀರ್ಣದ ಕಟ್ಟಡ ನಿರ್ಮಾಣ ಮಾಡಲಾಗುವುದು.
ಸದರಿ ನಿರ್ಮಾಣ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆಯ (ಪಿ.ಆರ್.ಎ.ಎಮ್.ಸಿ – ಯೋಜನೆ ಮತ್ತು ರಸ್ತೆಗಳ ಆಸ್ತಿ ನಿರ್ವಹಣೆ ಕೇಂದ್ರ) ಮುಖಾಂತರ ಅನುಷ್ಠಾನಗೊಳಿಸುವುದು.

ಶಿಡ್ಲಘಟ್ಟದಲ್ಲಿ ಹೈಟೆಕ್ ರೇಷ್ಮೆಗೂಡಿನ ಮಾರುಕಟ್ಟೆ ನಿರ್ಮಾಣ ಕಾಮಗಾರಿ
ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟದಲ್ಲಿ ಹೈಟೆಕ್ ರೇಷ್ಮೆಗೂಡಿನ ಮಾರುಕಟ್ಟೆಯನ್ನು ರೂ.200.00 ಕೋಟಿಗಳ ಅಂದಾಜು ಮೊತ್ತದಲ್ಲಿ ನಿರ್ಮಾಣ ಮಾಡಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
ಪ್ರಸ್ತುತ ಇರುವ ಮಾರುಕಟ್ಟೆ ವಿಸ್ತೀರ್ಣ 5.00 ಎಕರೆ ವಿಸ್ತೀರ್ಣದಲ್ಲಿದ್ದು, ಹೈಟೆಕ್ ಮಾರುಕಟ್ಟೆ ಮಾಡಲು ಅಸಾಧ್ಯ. ಪ್ರತಿನಿತ್ಯ 1500 ರಿಂದ 2000 ಜನ ವಹಿವಾಟಿನಲ್ಲಿ ಭಾಗವಹಿಸುತ್ತಿ ರುವುದರಿಂದ ಹೆಚ್ಚಿನ ಜನಸಂದಣಿಯಿಂದಾಗಿ ಸುಗಮ ವಹಿವಾಟಿಗೆ ಧಕ್ಕೆಯಾಗಿದೆ.
ಮಾರುಕಟ್ಟೆಗೆ ಪ್ರತಿದಿನ ಪ್ರಸ್ತುತ ಬರುತ್ತಿರುವ 30 ರಿಂದ 35 ಟನ್ ರೇಷ್ಮೆ ಗೂಡಿನ ವಹಿವಾಟನ್ನು 80 ರಿಂದ 100 ಟನ್ಗೆ ಹೆಚ್ಚಿಸಲು ಯೋಜಿಸಲಾಗಿದೆ.
•ನಬಾರ್ಡ್ ಯೋಜನೆಯಡಿ ರೂ.75.00 ಕೋಟಿ.
•ನಬಾರ್ಡ್ ಏತರ ರೂ.125.00 ಕೋಟಿ.
•ಸದರಿ ಯೋಜನೆಯನ್ನು ಲೋಕೋಪಯೋಗಿ ಇಲಾಖೆಯ ಯೋಜನೆ ಮತ್ತು ಮತ್ತು ರಸ್ತೆಗಳ ಆಸ್ತಿ ನಿರ್ವಹಣೆ ಕೇಂದ್ರ ಮುಖಾಂತರ ಅನುಷ್ಠಾನಗೊಳಿಸಲು ತೀರ್ಮಾನಿಸಲಾಗಿದೆ.

ಕೌಶಲ್ಯಾಭಿವೃದ್ಧಿ ನಿಗಮ ಸ್ಥಾಪನೆ
ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ ಹೆಸರಿನಲ್ಲಿ ಹೊಸ ಕಂಪನಿ ಸ್ಥಾಪಿಸಲು ನಿರ್ಣಯಿಸಲಾಗಿದೆ. ಈ ಕಂಪನಿಯು ರೂ.5.00 ಕೋಟಿ ಷೇರು ಬಂಡವಾಳ ಹೊಂದಿರುತ್ತದೆ.

ಪರಿಫೆರಲ್ ರಿಂಗ್ ರಸ್ತೆ ಮಾರ್ಪಾಡಿತ ಆದೇಶಕ್ಕೆ ಒಪ್ಪಿಗೆ
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ದಿನಾಂಕ: 19.09.2024 ರಂದು ಸಲ್ಲಿಸಿರುವ ಪ್ರಸ್ತಾವನೆಯನ್ವಯ ಈಗಾಗಲೇ ದಿನಾಂಕ: 12.09.2024 ರಂದು ಹೊರಡಿಸಿರುವ ಸರ್ಕಾರಿ ಆದೇಶದ ಭಾಗ ಕ್ರಮ ಸಂಖ್ಯೆ (3)ರ ಅಂಶವನ್ನು ರದ್ದುಪಡಿಸಿ ತಿದ್ದುಪಡಿ ಆದೇಶವನ್ನು ಹೊರಡಿಸಿರುವ ಕ್ರಮಕ್ಕೆ ಸಚಿವ ಸಂಪುಟದ ಘಟನೋತ್ತರ ಅನುಮೋದನೆ ನೀಡಲಾಗಿದೆ.
“ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ (ಪೆರಿಫೆರಲ್ ರಿಂಗ್ ರಸ್ತೆ)ನ ಯೋಜನೆಯಲ್ಲಿ ಒಳಗೊಂಡಿರುವ ಗ್ರಾಮಗಳ ಜಮೀನಿನ ಮಾರ್ಗಸೂಚಿ ದರಗಳು ವಿಭಿನ್ನವಾಗಿರುವುದರಿಂದ ಭೂ ಸ್ವಾಧೀನ ಪಡಿಸಿಕೊಳ್ಳುವ ಜಮೀನಿನ ಭೂಮಾಲೀಕರಿಗೆ ಆಯಾ ಗ್ರಾಮವಾರು ಮಾರ್ಗಸೂಚಿ ದರವನ್ನು ಗಮನದಲ್ಲಿರಿಸಿಕೊಂಡು ಸಂಧಾನ ಸೂತ್ರ (ಸಂಧಾನಿತ ಮೊತ್ತ)ದ ಮೂಲಕ ಭೂಸ್ವಾಧೀನ ಕಾಯ್ದೆ 1894 ರಡಿ ನಿಗಧಿಪಡಿಸಬಹುದಾದ ಭೂಪರಿಹಾರ ಮೊತ್ತಕ್ಕಿಂತ ಹೆಚ್ಚಿನ ಪರಿಹಾರ ಮೊತ್ತವನ್ನು ನಿಗಧಿಪಡಿಸಲು ಅಥವಾ ಭೂಮಾಲೀಕರು ಒಪ್ಪಿದಲ್ಲಿ ಟಿ.ಡಿ.ಆರ್ ನೀಡಲು” ಆದೇಶ ಹೊರಡಿಸಲಾಗಿತ್ತು.

ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರಿಗೆ ಸಮವಸ್ತ್ರ
ಪ್ರತಿಯೊಬ್ಬ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರಿಗೆ ಪ್ರತಿ ವರ್ಷ 02 ಸೀರೆಗಳನ್ನು ವಿತರಿಸಲಾಗುತ್ತದೆ. ಕರ್ನಾಟಕ ಕೈಮಗ್ಗ ನಿಗಮ ನಿಯಮಿತದಿಂದಲೇ ಖರೀದಿಸಬೇಕೆಂಬ ಷರತ್ತು ವಿಧಿಸಿ ಈ ಹಿಂದೆ ಸಚಿವ ಸಂಪುಟ ಅನುಮೋದನೆ ನೀಡಿತ್ತು. ಕೇಂದ್ರ ಸರ್ಕಾರದ ಅನುದಾನ ಇರುವುದರಿಂದ ಇ-ಟೆಂಡರ್ ಅಥವಾ ಜೆಮ್ ಪೋರ್ಟಲ್ ಮುಖಾಂತರ ಖರೀದಿಸುವುದು ಸೂಕ್ತವಾಗಿದೆ ಎಂದು ಪರಿಗಣಿಸಿ ಟೆಂಡರ್ ಮುಖಾಂತರ ಖರೀದಿಸಲು ಸಚಿವ ಸಂಪುಟ ನಿರ್ಣಯಿಸಿದೆ.

69,919 ಅಂಗನವಾಡಿ ಕೇಂದ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ 1,37,509 ಅಂಗನವಾಡಿ ಕಾರ್ಯಕರ್ತ ಮತ್ತು ಸಹಾಯಕಿಯರಿಗೆ ಐ.ಸಿ.ಡಿ.ಎಸ್ ಯೋಜನೆಯ ನಿಯಮಾನುಸಾರ ತಲಾ ಎರಡು ಸೀರೆಗಳಂತೆ ಒಟ್ಟು 2,75,018 ಸೀರೆಗಳನ್ನು ಕಟಿಪಿಪಿ ಪೋರ್ಟಲ್ (ಇ-ಟೆಂಡರ್ / ಜೆಮ್ ಪೋರ್ಟಲ್ ಮುಖಾಂತರ ಖರೀದಿಸಲು 2024-25 ನೇ ಸಾಲಿನ ಅನುದಾನದಿಂದ ರೂ. 13.75 ಕೋಟಿಗಳ ವೆಚ್ಚವನ್ನು ಭರಿಸಲು”ಸಚಿವ ಸಂಪುಟ ತೀರ್ಮಾನಿಸಿದೆ ಎಂದು ಕಾನುನು, ಸಂಸದೀಯ ವ್ಯವಹಾರಗಳ ಸಚಿವರು ತಿಳಿಸಿದರು.

ಜಮೀನು ಹಂಚಿಕೆ
ಸಣ್ಣ ಕೈಗಾರಿಕೆಗಳ ತರಬೇತಿ ಮತ್ತು ಸಾಮಾನ್ಯ ಸೌಲಭ್ಯ ಕೇಂದ್ರವನ್ನು ರಾಷ್ಟ್ರೀಯ ಸಣ್ಣ ಕೈಗಾರಿಕಾ ನಿಗಮ ಸಂಸ್ಥೆಗೆ ಹಂಚಿಕೆ ಮಾಡಲು ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ಪೀಣ್ಯ 1ನೇ ಹಂತದಲ್ಲಿರುವ ಕೈಗಾರಿಕಾ ವಸಾಹತುಗಳು ನಿವೇಶನ/ಮಳಿಗೆ ಸಂಖ್ಯೆ ಎ-180ನ್ನು 30 ವರ್ಷಗಳ ಕರಾರು ಅವಧಿಗೆ ವಾರ್ಷಿಕ ರೂ.1/- ಶುಲ್ಕದ ಆಧಾರದ ಮೇಲೆ ನೀಡಲು ತೀರ್ಮಾನಿಸಿದೆ.

ಕಾನೂನು ಆಯೋಗ
ರಾಜ್ಯ ಕಾನೂನು ಆಯೋಗದ ಅವಧಿ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಕಾನೂನು ಅಯೋಗದ ಹೊಸ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಕ ಮಾಡಲು ಮುಖ್ಯಮಂತ್ರಿಯವರಿಗೆ ಅಧಿಕಾರ ನೀಡಲಾಗಿದೆ ಎಂದು ಕಾನೂನು, ಸಂಸದೀಯ ವ್ಯವಹಾರ ಸಚಿವ ಎಚ್.ಕೆ ಪಾಟೀಲ ರವರು ವಿವರಿಸಿದರು.

Share with Friends
author avatar
News Desk