
ದುರ್ಗಾಪುರ ಉಕ್ಕು ಸ್ಥಾವರಕ್ಕೆ ಕುಮಾರಸ್ವಾಮಿ ಭೇಟಿ
ದುರ್ಗಾಪುರ(ಪಶ್ಚಿಮ ಬಂಗಾಳ),ಜು.13: ಪಶ್ಚಿಮ ಬಂಗಾಳದ ಅಧಿಕೃತ ಭೇಟಿಯಲ್ಲಿರುವ ಕೇಂದ್ರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ದುರ್ಗಾಪುರ ಉಕ್ಕು ಕಾರ್ಖಾನೆಗೆ ಭೇಟಿ ನೀಡಿ ವ್ಯಾಪಕವಾಗಿ ಪರಿಶೀಲನೆ ನಡೆಸಿದರು.
ಈ ಮೊದಲು ಬರ್ನ್ ಪುರದ ಇಸ್ಕೋ ಮುಖ ಕಾರ್ಖಾನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಕುಮಾರಸ್ವಾಮಿ ಬಳಿಕ ದುರ್ಗಾಪುರ ಕಾರ್ಖಾನೆಯ ಪರಿಶೀಲನೆ ಮತ್ತು ನೇರ ವೀಕ್ಷಣೆ ಕೈಗೊಂಡ ಕೇಂದ್ರ ಸಚಿವರು, ಪ್ರಮುಖ ಉತ್ಪಾದನಾ ಸೌಲಭ್ಯಗಳನ್ನು ಪರಿಶೀಲಿಸಿ, ಉಕ್ಕು ಸಚಿವಾಲಯದ ಸಂಸದೀಯ ಸಮಾಲೋಚನಾ ಸಮಿತಿ ಸಭೆಯಲ್ಲಿ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಭಾರತದ ಉಕ್ಕು ಉತ್ಪಾದಕ ಸಂಸ್ಥೆಗಳಲ್ಲಿಯೇ ದೈತ್ಯ ಸಂಸ್ಥೆಯಾದ ಭಾರತೀಯ ಉಕ್ಕು ಪ್ರಾಧಿಕಾರದ ಬೆಳವಣಿಗೆ ಮತ್ತು ಮುನ್ನೋಟದ ಕುರಿತು ಸಂಸದೀಯ ಸಮಿತಿ ಜತೆ ವಿಸೃತವಾಗಿ ಸಮಾಲೋಚನೆ ನಡೆಸಿದರು.
ಸಭೆಯಲ್ಲಿ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ರಾಜ್ಯ ಸಚಿವ ಭೂಪತಿರಾಜು ಶ್ರೀನಿವಾಸ ವರ್ಮ,ಸಂಸದೀಯ ಸಮಿತಿಯ ಸದಸ್ಯರಾದ ಸಂಸತ್ ಸದಸ್ಯರುಗಳು, ಉಕ್ಕು ಸಚಿವಾಲಯದ ಕಾರ್ಯದರ್ಶಿ ಸಂದೀಪ್ ಪೌಂಡ್ರಿಕ್, ಭಾರತೀಯ ಉಕ್ಕು ಪ್ರಾಧಿಕಾರದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಅಶೋಕ್ ಕುಮಾರ್ ಪಾಂಡ ಸೇರಿದಂತೆ ಸಚಿವಾಲಯದ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಕೇಂದ್ರ ಸಚಿವರು ದುರ್ಗಾಪುರ ಉಕ್ಕು ಸ್ಥಾವರದ ಬೆಳವಣಿಗೆ ಕುರಿತು ಚರ್ಚೆ ನಡೆಸಿದರು.

ಭಾರತೀಯ ಉಕ್ಕು ಪ್ರಾಧಿಕಾರದ ಕಾರ್ಯಕ್ಷಮತೆ ವೃದ್ಧಿಸುವ ನಿಟ್ಟಿನಲ್ಲಿ ಈಗಾಗಲೇ ಕೈಗೊಂಡಿರುವ ಉಪಕ್ರಮಗಳು ಹಾಗೂ ಮುಂದಿನ ದಿನಗಳಲ್ಲಿ ರೂಪಿಸಲಾಗಿರುವ ವಿಸ್ತರಣಾ ಯೋಜನೆಗಳು ಇತ್ಯಾದಿಗಳ ಬಗ್ಗೆ ಸಚಿವರು ಅತ್ಯಂತ ಮಹತ್ವಪೂರ್ಣವಾಗಿ ಸಮಾಲೋಚನೆ ನಡೆಸಿದರು. ಅಲ್ಲದೆ ದೀರ್ಘಾವಧಿ ಸುಸ್ಥಿರ ಬೆಳವಣಿಗೆ ದೃಷ್ಟಿಯಿಂದ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ಉಕ್ಕು ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುವ ಹೆಗ್ಗುರಿಯೊಂದಿಗೆ ಸಚಿವರು ತಮ್ಮ ಚರ್ಚೆಯನ್ನು ನಡೆಸಿದರು.
