
ಸಿರವಾರ: ಕವಿತಾಳದಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ದಲಿತ ಸಂಘಟನೆಗಳ ಧರಣಿ ಸತ್ಯಾಗ್ರಹ..!
ಕವಿತಾಳ: ರಾಯಚೂರು ಜಿಲ್ಲೆ ಸಿರವಾರ ತಾಲೂಕಿನ ಕವಿತಾಳ ಪಟ್ಟಣದಲ್ಲಿ ಮೂಲಭೂತ ಸೌಕರ್ಯಗಳ ಬೇಡಿಕೆಗಳ ಈಡೇರಿಕೆಗಾಗಿ ದಲಿತ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಎರಡನೇ ದಿನವೂ ಧರಣಿ ಸತ್ಯಾಗ್ರಹ ನಡೆಯಿತು.
ಪಟ್ಟಣದ ಪಂಚಾಯಿತಿ ಆವರಣದಲ್ಲಿ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಈರಣ್ಣ ಕೆಳಗೇರಿ, ಹುಚ್ಚಪ್ಪ ವಡವಟ್ಟಿ, ಹರಳಪ್ಪ ತುಪ್ಪದೂರ್ ಅವರು ಮಾತನಾಡಿದರು.
ಪ್ರಮುಖ ಬೇಡಿಕೆಗಳು
ಮಾನ್ಯ ಸಿರವಾರ ತಾಲೂಕು ತಹಸೀಲ್ದಾರ್ ಅಶೋಕ್ ಪವಾರ್ ಅವರಿಗೆ ಸಲ್ಲಿಸಿದ ಮನವಿಯಲ್ಲಿ ಸಂಘಟನೆಗಳು ಈ ಕೆಳಗಿನ ಬೇಡಿಕೆಗಳನ್ನು ಮುಂದಿಟ್ಟವು:

- ಭೂಮಿ ನೊಂದಣಿ: ಸುಮಾರು 1970-71ರ ಸರ್ವೆ ನಂಬರ್ 12, 13, 14 ರಲ್ಲಿ ಪಹಣಿಯಲ್ಲಿರುವ ಮಾಲೀಕರ ಹೆಸರನ್ನು ತೆಗೆದು ರಾಜ್ಯಪಾಲರ ಹೆಸರಿಗೆ ನೊಂದಣಿ ಮಾಡಬೇಕು
- ಕಾಮಗಾರಿ ತನಿಖೆ: 2024 ರಿಂದ 2026ರವರೆಗೆ ಭೂಸೇನೆ ನಿಗಮದಿಂದ ನಡೆದ ಕಾಮಗಾರಿಗಳ ತನಿಖೆ ಮಾಡಬೇಕು
- ಆಶ್ರಯ ಕಾಲೋನಿ: ಆಶ್ರಯ ಬೋಸರಾಜ್ ಕಾಲೋನಿಯನ್ನು ಪುನರ್ ಪರಿಶೀಲಿಸಿ ಅಭಿವೃದ್ಧಿಪಡಿಸಬೇಕು
- ಪಂಚಾಯಿತಿ ಜಾಗ: ಸರ್ವೆ ನಂಬರ್ 662ರ ಪಂಚಾಯತಿ ಹೆಸರಿನಲ್ಲಿರುವ ಜಾಗವನ್ನು ಸ್ವಾಧೀನಪಡಿಸಿಕೊಳ್ಳಬೇಕು
- ಸಾರ್ವಜನಿಕ ಸೌಲಭ್ಯ: ಪಟ್ಟಣದ ಸಾರ್ವಜನಿಕ ಸ್ಥಳಗಳಲ್ಲಿ ಶೌಚಾಲಯ ನಿರ್ಮಾಣ ಮಾಡಬೇಕು
ಪ್ರತಿಭಟನಾ ಸ್ಥಳಕ್ಕೆ ಮಾನ್ಯ ತಹಸೀಲ್ದಾರ್ ಅಶೋಕ್ ಪವಾರ್ ಮತ್ತು ಕವಿತಾಳ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಜಸ್ಪಾಲ್ ಸಿಂಗ್ ಭೇಟಿ ನೀಡಿದರು.ಅವರು ಪ್ರತಿಭಟನಾಕಾರರ ಮನವಿಯನ್ನು ಸ್ವೀಕರಿಸಿ, “ಆದಷ್ಟು ಬೇಗನೆ ನಿಮ್ಮೆಲ್ಲ ಬೇಡಿಕೆಗಳನ್ನು ಪರಿಶೀಲಿಸಿ ಪಟ್ಟಣದ ಅಭಿವೃದ್ಧಿಗಾಗಿ ಎಲ್ಲಾ ಬೇಡಿಕೆಗಳನ್ನು ಈಡೇರಿಸಲಾಗುವುದು” ಎಂದು ಭರವಸೆ ನೀಡಿದರು.ಈ ಸಂದರ್ಭದಲ್ಲಿ ಹುಚ್ಚಪ್ಪ, ಹನುಮಂತ ಬಳ್ಳಾಪುರ್, ಬಾಲಸ್ವಾಮಿ ಜಿನ್ನಾಪುರ್, ರಫಿ ವಂಟಿಬಂಡಿ, ಮೌನೇಶ್ ಮಹದೇವ್, ಮೌಲಾಲಿ ಸೇರಿದಂತೆ ಕವಿತಾಳ ಪಟ್ಟಣದ ಸಾರ್ವಜನಿಕರು ಹಾಗೂ ದಲಿತ ಸಂಘಟನೆಗಳ ಕಾರ್ಯಕರ್ತರು ಉಪಸ್ಥಿತರಿದ್ದರು.ಬೇಡಿಕೆಗಳನ್ನು ತಕ್ಷಣ ಈಡೇರಿಸದಿದ್ದರೆ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸುವುದಾಗಿ ಸಂಘಟನೆಯ ಮುಖಂಡರು ಎಚ್ಚರಿಕೆ ನೀಡಿದರು.
