ರಾಯಚೂರು : ಆಶ್ರಮದಲ್ಲಿ ಸ್ವಾಮೀಜಿಯಿಂದ ವಿದ್ಯಾರ್ಥಿಗೆ ಮಾರಣಾಂತಿಕ ಹಲ್ಲೆ, ಕಿರುಕುಳ
ರಾಯಚೂರು : ನಗರದ ಆಶ್ರಮ ಒಂದರಲ್ಲಿ ಸ್ವಾಮೀಜಿಯಿಂದ ವಿದ್ಯಾರ್ಥಿ ಮೇಲೆ ಮನಸೋಇಚ್ಚೇ ಥಳಿಸಿದ ಅಮಾನವೀಯ ಘಟನೆ ನಡೆದಿದೆ. ಕ್ಷುಲ್ಲಕ ಕಾರಣಕ್ಕೆ ಕಣ್ಣಿಗೆ ಕಾರಪುಡಿ ಹಾಕಿ, ಬೆಲ್ಟ್ ನಿಂದ ಹೊಡೆದಿರುವ ಆರೋಪ ಮಾಡಲಾಗಿದೆ.
ರಾಯಚೂರು ನಗರದ ಸ್ಟೇಷನ್ ರಸ್ತೆಯಲ್ಲಿ ಇರುವ ರಾಮಕೃಷ್ಣ ಆಶ್ರಮದಲ್ಲಿ ಈ ಘಟನೆ ನಡೆದಿದ್ದು ಸರ್ಕಾರಿ ಶಾಲೆಯಲ್ಲಿ ಓದುತ್ತಾ, ಬಡತನದ ಕಾರಣ ಆಶ್ರಮದಲ್ಲಿದ್ದ ಬಾಲಕ 3ನೇ ತರಗತಿ ವಿದ್ಯಾರ್ಥಿ ಶರುಣ್ ಕುಮಾರ್ ಮೇಲೆ ಮಾರಣಾಂತಿಕ ಹಲ್ಲೆ ಮಾಡಲಾಗಿದೆ. ಆಶ್ರಮದಲ್ಲಿದ್ದ ಪಿ ವೇಣುಗೋಪಾಲ್ ಸ್ವಾಮಿ ಎಂಬ ಸ್ವಾಮೀಜಿ ಅವರಿಂದ ಮಾರಣಾಂತಿಕ ಹಲ್ಲೆ ನಡೆದಿದೆ.
ಮನಬಂದಂತೆ ಬಾಲಕನಿಗೆ ಥಳಿಸಿ, ಮೂರು ದಿನ ಕತ್ತಲೆ ಕೋಣೆಯಲ್ಲಿ ಕೂಡಿಹಾಕಿದ್ದ ಆರೋಪ ಕೇಳಿಬಂದಿದೆ. ಆಕಸ್ಮಿಕವಾಗಿ ಆಶ್ರಮಕ್ಕೆ ಭೇಟಿ ನೀಡಿದ ಬಾಲಕನ ತಾಯಿಗೆ ವಿಷಯ ತಿಳಿದು ಆಸ್ಪತ್ರೆಗೆ ದಾಖಲು ಮಗನಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಮಕ್ಕಳಿಗೆ ಆಶ್ರಯ ನೀಡುತ್ತೇನೆಂದು ಪಿ ವೇಣುಗೋಪಾಲ್ ಸ್ವಾಮಿ ಹಿಂಸೆ ಕೊಡುತ್ತಿದ್ದಾನೆ ಎಂದು ಪೋಷಕರು ಆರೋಪ ಮಾಡಿದ್ದಾರೆ. ಈ ಕುರಿತು ನಗರದ ಪಶ್ಚಿಮ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
