BlogTop Storiesರಾಜಕೀಯ | Politicsರಾಜ್ಯ-Karnataka

ಮುನಿರತ್ನ ಪ್ರಕರಣದಲ್ಲಿ ರಾಜಕೀಯ ಬೆಳವಣಿಗೆ : ಚಲುವರಾಜು ಮನೆಗೆ ಲಕ್ಷ್ಮೀ ಹೆಬ್ಬಾಳ್ಕರ್ ಭೇಟಿ, ನಾಳೆ ಇನ್ನೆರಡು ಆಡಿಯೋ ರಿಲೀಸ್

ಬೆಂಗಳೂರು : ರಾಜರಾಜೇಶ್ವರಿನಗರ ಕ್ಷೇತ್ರದ ಶಾಸಕ ಮುನಿರತ್ನ ಆಡಿಯೋ ಪ್ರಕರಣ ಇದೀಗ ರಾಜಕೀಯ ತಿರುವನ್ನು ಪಡೆದುಕೊಳ್ಳುತ್ತಿದ್ದು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಜೀವ ಬೆದರಿಕೆ ಹಾಗೂ ಕುಟುಂಬ ಸದಸ್ಯರ ಬಗ್ಗೆ ಹೀನ ಮಾತುಗಳಿಂದ ನೊಂದಿರುವ ಬಿಬಿಎಂಪಿ ಗುತ್ತಿಗೆದಾರರಾದ ಚಲುವರಾಜು ಅವರ ಮನೆಗೆ ಭೇಟಿ ನೀಡಿ, ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದ್ದಾರೆ.

ಬಳಿಕ ಮಾತನಾಡಿದ ಸಚಿವರು, ಬಿಜೆಪಿ ಶಾಸಕರ ನಿಂದನೆ ಮಾತುಗಳಿಂದ ನೊಂದಿರುವ ಚಲುವರಾಜು ಹಾಗೂ ಅವರ ಕುಟುಂಬಕ್ಕೆ ಧೈರ್ಯ ತುಂಬಿದ್ದು, ಸರ್ಕಾರದಿಂದ ಸೂಕ್ತ ರಕ್ಷಣೆ ಹಾಗೂ ನ್ಯಾಯ ಒದಗಿಸುವುದಾಗಿ ಹೇಳಿದರು. ಕಳೆದ ಎರಡು ದಿನಗಳಿಂದ ಮಾಧ್ಯಮದಲ್ಲಿ ಬರುತ್ತಿರುವ ವಿಚಾರವನ್ನು ಸೂಕ್ಷ್ಮವಾಗಿ ಸರ್ಕಾರ ಗಮನಿಸುತ್ತಿದೆ.

ಮಹಿಳೆಯಾಗಿ ಇನ್ನೊಬ್ಬ ಮಹಿಳೆಗೆ ಧೈರ್ಯ ತುಂಬುವ ಕೆಲಸ ಮಾಡ್ವೇಕು ಅಂತಾ ಬಂದಿರುವೆ. ಆಡಿಯೋ ಕೇಳಿಸಿಕೊಡಿಲ್ಲ, ಅಸಹ್ಯವಾಗಿ ಇದೆ ಅಂತ ಕೇಳಿದವರು ಹೇಳುತ್ತಾರೆ. ಗುತ್ತಿಗೆದಾರ ಚಲುವರಾಜು ಜೊತೆ ಸರ್ಕಾರ ಇರುತ್ತದೆ. ಅವರ ಕುಟುಂಬದ ರಕ್ಷಣೆ ಜವಾಬ್ದಾರಿ ಸರ್ಕಾರದ್ದು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ಗುತ್ತಿಗೆದಾರನ ಮೇಳೆ ಮಾಜಿ ಮಂತ್ರಿಗಳು ಜಾತಿ ನಿಂದನೆ ಮಾಡುವುದು ಸರಿಯಲ್ಲ. ನಿಷ್ಪಕ್ಷಪಾತವಾಗಿ ಕಾನೂನು ಕ್ರಮ ತೆಗೆದುಕೊಳ್ಳಲು ಸರ್ಕಾರ ಮುಂದಾಗಿದೆ. ಮುನಿರತ್ನ ಅವರ ಮಾತುಗಳಿಂದ ಚಲುವರಾಜು ಕುಟುಂಬ ಖಿನ್ನತೆಗೆ ಒಳಪಟ್ಟಿದೆ. ಹೀಗಾಗಿ ಮಾನಸಿಕ ಒತ್ತಡ ಕಡಿಮೆ ಮಾಡುವುದಕ್ಕೆ ಧೈರ್ಯ ಹೇಳುವುದಕ್ಕೆ ಅವರ ಮನೆಗೆ ಭೇಟಿ ನೀಡಿರುವೆ ಎಂದು ಸಚಿವರು ಹೇಳಿದರು.

ಮುನಿರತ್ನ ಕುರಿತ ಇನ್ನೂ ಎರಡು ಆಡಿಯೋ ನಾಳೆ ಬಿಡುಗಡೆ :
ಆರ್.ಆರ್ ನಗರ ಬಿಜೆಪಿ ಶಾಸಕ ಮುನಿರತ್ನ ಅವರ ಕುರಿತ ಇನ್ನೂ ಎರಡು ಆಡಿಯೋ ಗಳು ಇವೆ. ಅವುಗಳನ್ನ ನಾಳೆ ಬಿಡುಗಡೆ ಮಾಡುತ್ತೇನೆ ಎಂದು ಗುತ್ತಿಗೆದಾರ ಚಲುವರಾಜು ತಿಳಿಸಿದ್ದಾರೆ.ಈ ಕುರಿತು ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಗುತ್ತಿಗೆದಾರ ಚಲುವರಾಜು, ಹನುಮಂತರಾಯಪ್ಪ ಜತೆ ಮಾತಾಡಿದ ಆಡಿಯೋ ಹಾಗೂ 30 ಪರ್ಸೆಂಟ್ ಕಮಿಷನ್ ವಿಚಾರದ ಆಡಿಯೋ ಇದೆ. ಇವುಗಳನ್ನ ನಾಳೆ ಬಿಡುಗಡೆ ಮಾಡುತ್ತೇನೆ ಎಂದು ತಿಳಿಸಿದರು.ನನಗೆ ಶಾಸಕ ಮುನಿರತ್ನರಿಂದ ಜೀವಭಯವಿದೆ. ನನಗೆ ಭದ್ರತೆ ಬೇಕಿದೆ ಎಂದು ಚಲುವರಾಜು ತಿಳಿಸಿದ್ದಾರೆ.

ಮುನಿರತ್ನಗೆ ಕಠಿಣ ಶಿಕ್ಷೆ ಆಗಬೇಕು ಪುಷ್ಪ ಅಮರನಾಥ್ :
ಮುನಿರತ್ನ ಅಂತ ಹೆಸರು ಇಟ್ಟುಕೊಂಡು ಇಂತ ನೀಚ ಮಾತುಗಳನ್ನಾಡುವ ಈತನಿಗೆ ಕಠಿಣ ಶಿಕ್ಷೆ ಆಗಬೇಕು. ಮುನಿರತ್ನ ರಾಜೀನಾಮೆ ನೀಡುವವರೆಗೂ ನಾವು ಹೋರಾಟ ಮಾಡುತ್ತೇವೆ ಎಂದು ಕೆಪಿಸಿಸಿ ಮಹಿಳಾ ಘಟಕದ ಮಾಜಿ ಅಧ್ಯಕ್ಷೆ ಪುಷ್ಪ ಅಮರನಾಥ್ ತಿಳಿಸಿದರು.

ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪುಷ್ಪ ಅಮರನಾಥ್, ಶಾಸಕ ಮುನಿರತ್ನ ಅವರ ಅವಹೇಳನಕಾರಿ ಆಡಿಯೋ ಕುರಿತು ತೀವ್ರ ಖಂಡನೆ ವ್ಯಕ್ತಪಡಿಸಿದರು. ಅವನ ಹೆಸರು ಹೇಳಲಿಕ್ಕೂ ಅಸಹ್ಯವಾಗುತ್ತದೆ. ಮಹಿಳೆಯರು, ದಲಿತರ ಅಂದರೆ ಏನೆಂದುಕೊಂಡಿದ್ದಾರೆ ಇವರು? ಬಿಜೆಪಿ ನಾಯಕರ ಮನಸ್ಥಿತಿ ಏನು ಅಂತ ಇಂತ ಬಿಜೆಪಿ ನಾಯಕರ ಮಾತಿನಿಂದ ವ್ಯಕ್ತವಾಗುತ್ತದೆ.

ಈ ವಿಚಾರವಾಗಿ ಬಿಜೆಪಿ ನಾಯಕರು ತುಟಿ ಬಿಚ್ಚುತ್ತಿಲ್ಲ ಯಾಕೇ.? ಮುನಿರತ್ನ ಅವರ ರಾಜೀನಾಮೆ ಪಡೆದು ಆತನನ್ನು ಪಕ್ಷದಿಂದ ಉಚ್ಚಾಟನೆ ಮಾಡಿ, ವಜಾ ಮಾಡಬೇಕು. ತಾಕತ್ತು ದಮ್ಮುಗಳ ಬಗ್ಗೆ ಮಾತನಾಡುವ ಬಿಜೆಪಿ ನಾಯಕರು ಈತನ ಮೇಲೆ ಕ್ರಮ ಕೈಗೊಳ್ಳಲಿ. ಮುನಿರತ್ನ ರಾಜಿನಾಮೆ ಕೊಡುವವರೆಗೂ ನಾವು ಹೋರಾಟ ಮಾಡುತ್ತೇವೆ ಎಂದು ವಾಗ್ದಾಳಿ ನಡೆಸಿದರು.

Share with Friends
author avatar
News Desk