ಮಲೆನಾಡಿನಲ್ಲಿ ಭಾರೀ ಮಳೆ, ತುಂಬಿ ಹರಿದ ತುಂಗಾ
ಶಿವಮೊಗ್ಗ,ಜು.8: ರಾಜ್ಯದ ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಲಾಶಯಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ.
ಸದ್ಯ ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದಲ್ಲಿ ವ್ಯಾಪಕ ಮಳೆಯಾಗುತ್ತಿರುವ ಪರಿಣಾಮ ತುಂಗಾ ಜಲಾಶಯಕ್ಕೆ ಹೆಚ್ಚಿನ ನೀರು ಹರಿಬಂದಿದೆ.ಅದರಲ್ಲೂ ನಿನ್ನೆ 43 ಸಾವಿರ ಕ್ಯೂಸೆಕ್ಸ್ ನೀರು ಹರಿದು ಬಂದ ಹಿನ್ನೆಲೆಯಲ್ಲಿ ತುಂಗೆ ಅಪಾಯದ ಮಟ್ಟ ತಲುಪಿದ್ದಾಳೆ.

ಶಿವಮೊಗ್ಗ ನಗರದ ಮೂಲಕ ಹರಿಯುವ ತುಂಗಾ ನದಿಯ ನೀರಿನ ಮಟ್ಟದಲ್ಲಿ ಗಣನೀಯ ಏರಿಕೆ ಕಂಡುಬಂದಿದ್ದು,ಈ ಬಗ್ಗೆ ಕೇಂದ್ರ ಜಲ ಆಯೋಗವು ಅಧಿಕೃತ ಪ್ರವಾಹ ಮುನ್ಸೂಚನೆ ಬಿಡುಗಡೆ ಮಾಡಿದೆ.
ಕಳೆದ ಜುಲೈ 4 ರಿಂದ ನದಿಯ ನೀರಿನ ಮಟ್ಟವು ನಿರಂತರವಾಗಿ ಏರಿಕೆಯಾಗುತ್ತಿದೆ. ಜುಲೈ 4 ರಂದು ಸುಮಾರು 563.5 ಮೀಟರ್ ಆಸುಪಾಸಿನಲ್ಲಿದ್ದ ನೀರಿನ ಮಟ್ಟವು, ಜುಲೈ 7 ರ ಸಂಜೆಯ ವೇಳೆಗೆ 566 ಮೀಟರ್ ತಲುಪಿದ್ದು, ಸದ್ಯ ಮುನ್ನೆಚ್ಚರಿಕೆ ಮಟ್ಟದ ಅತ್ಯಂತ ಸಮೀಪದಲ್ಲಿ ಹರಿಯುತ್ತಿದೆ.

ಕೃಷ್ಣಾ ಕೊಳ್ಳಕ್ಕೆ ಒಳಪಡುವ ತುಂಗಾ ನದಿಯ ಮುನ್ನೆಚ್ಚರಿಕೆ ಮಟ್ಟ 566.8 ಮೀಟರ್ ಹಾಗೂ ಅಪಾಯದ ಮಟ್ಟ 567.3 ಮೀಟರ್ ಎಂದು ಗುರುತಿಸಲಾಗಿದೆ. ಇನ್ನೂ ನದಿಯ ನೀರಿನ ಹರಿವು ಸದ್ಯ ಮೇಲ್ಮುಖ ಚಲನೆಯನ್ನು ಹೊಂದಿದೆ.ಈ ಸಂಬಂಧ ನದೀ ತೀರದ ಸಾರ್ವಜನಿಕರು ಮತ್ತು ತಗ್ಗು ಪ್ರದೇಶದ ನಿವಾಸಿಗಳು ಜಾಗರೂಕರಾಗಿರುವಂತೆ ಸೂಚಿಸಲಾಗಿದೆ.
