ಖ್ಯಾತ ಜನಪದ ಕಲಾವಿದ, ನಟ ಗುರುರಾಜ್ ಹೊಸಕೋಟೆ ಕಾರು ಅಪಘಾತ
ಬಾಗಲಕೋಟೆ : ಖ್ಯಾತ ಜನಪದ ಕಲಾವಿದ, ಚಿತ್ರನಟ ಗುರುರಾಜ್ ಹೊಸಕೋಟೆ ಪ್ರಯಾಣಿಸುತ್ತಿದ್ದ ಕಾರು ಅಪಘಾತವಾಗಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಸೊರಗಾವಿ ಬಳಿ ನಡೆದಿದೆ.
ಎದುರಿನಿಂದ ಬರುತ್ತಿದ್ದ ವಾಹನ ತಪ್ಪಿಸಲು ಹೋಗಿ ಕಾರು ರಸ್ತೆ ಪಕ್ಕದ ಬಂಡೆಗಲ್ಲಿಗೆ ಡಿಕ್ಕಿ ಹೊಡೆದಿದೆ. ಕಾರಿನ ಮುಂಭಾಗ ಸಂಪೂರ್ಣ ನುಜ್ಜುಗುಜ್ಜಾಗಿದೆ.
ಸದ್ಯ ಗುರುರಾಜ್ ಹೊಸಕೋಟೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರಿನಲ್ಲಿದ್ದ ಯಾರಿಗೂ ಯಾವುದೇ ತೊಂದರೆಯಾಗಿಲ್ಲ ಎಂದು ತಿಳಿದುಬಂದಿದೆ. ಗುರುರಾಜ್ ಹೊಸಕೋಟೆ ಸಿಂಧನೂರಿನಿದ ಮಹಾಲಿಂಗಪುರಕ್ಕೆ ತೆರಳುತ್ತಿದ್ದರು. ಈ ವೇಳೆ ಈ ಅಪಘಾತ ಸಂಭವಿಸಿದೆ.
ಗುರುರಾಜ್ ಹೊಸಕೋಟೆ ಜನಪದ ಸಮೂಹ ಗೀತೆಗಳನ್ನು ರಚಿಸಿ ಹಾಡುತ್ತಾರೆ. ಜೊತೆಗೆ ನೃತ್ಯವನ್ನು ಸಂಯೋಜನೆ ಮಾಡುತ್ತಾರೆ. ಅವರ ಹಾಡುಗಾರಿಕೆಯಿಂದಲೇ ಹೆಚ್ಚು ಖ್ಯಾತಿ ಪಡೆದಿದ್ದಾರೆ. ಇದಲ್ಲದೆ ಅನೇಕ ಸಿನಿಮಾಗಳಲ್ಲೂ ಹಾಡಿದ್ದಾರೆ. ಕರಿಯ, ದಾಸ, ಜೋಗಿ, ಅಂಬಿ ಹೀಗೆ ಅನೇಕ ಸಿನಿಮಾಗಳಿಗೆ ಹಾಡಿನ ಮೂಲಕ ಧ್ವನಿ ನೀಡಿದ್ದಾರೆ.
