Latestರಾಜಕೀಯ | Politicsರಾಷ್ಟ್ರೀಯ-National

ಟಿಎಂಸಿಗೆ ಮತ್ತೊಂದು ಶಾಕ್‌ : ರಾಜ್ಯಸಭಾ ಸಂಸದ ಪ್ರಕಾಶ್ ಬರೈಕ್ ರಾಜೀನಾಮೆ

ಕೋಲ್ಕತ್ತಾ, ಜೂನ್ 11: ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಪಕ್ಷಕ್ಕೆ ಮತ್ತೊಂದು ರಾಜಕೀಯ ಹಿನ್ನಡೆಯಾಗಿದ್ದು, ರಾಜ್ಯಸಭಾ ಸಂಸದ ಪ್ರಕಾಶ್ ಚಿಕ್ ಬರೈಕ್ ಗುರುವಾರ ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಇತ್ತೀಚೆಗೆ ಟಿಎಂಸಿ ನಾಯಕರಾದ ಸುಖೇಂದು ಶೇಖರ್ ರಾಯ್ ಹಾಗೂ ಸುಶ್ಮಿತಾ ದೇವ್ ರಾಜೀನಾಮೆ ನೀಡಿದ ಬೆನ್ನಲ್ಲೇ ಬರೈಕ್ ಅವರ ನಿರ್ಧಾರ ಪಕ್ಷದಲ್ಲಿ ಆತಂಕ ಹೆಚ್ಚಿಸಿದೆ.

ಪ್ರಕಾಶ್ ಬರೈಕ್ ಅವರ ರಾಜೀನಾಮೆಯೊಂದಿಗೆ ರಾಜ್ಯಸಭೆಯಲ್ಲಿ ಟಿಎಂಸಿ ಬಲ ಮತ್ತಷ್ಟು ಕುಸಿಯಲಿದ್ದು, ಪಕ್ಷದ ಸದಸ್ಯರ ಸಂಖ್ಯೆ 10ಕ್ಕೆ ಇಳಿಯಲಿದೆ ಎಂದು ತಿಳಿದುಬಂದಿದೆ. ಮುಂದಿನ ವಾರದೊಳಗೆ ಇನ್ನೂ ಮೂವರು ಟಿಎಂಸಿ ರಾಜ್ಯಸಭಾ ಸದಸ್ಯರು ರಾಜೀನಾಮೆ ನೀಡುವ ಸಾಧ್ಯತೆ ಇದೆ ಎಂಬ ಮಾಹಿತಿಯೂ ಮೂಲಗಳಿಂದ ಲಭ್ಯವಾಗಿದೆ.

ಟಿಎಂಸಿ ಸಂಸದರಲ್ಲಿ ಬಿಕ್ಕಟ್ಟು ಸೋಮವಾರದಿಂದಲೇ ಆರಂಭವಾಗಿದ್ದು, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಆಪ್ತ ಸಹಚರರೆಂದು ಗುರುತಿಸಲ್ಪಟ್ಟ ಸುಖೇಂದು ಶೇಖರ್ ರಾಯ್ ರಾಜೀನಾಮೆ ನೀಡಿದ್ದರು. ಇದರ ಬಳಿಕ ಪಕ್ಷದೊಳಗಿನ ಅಸಮಾಧಾನ ಬಹಿರಂಗವಾಗಿದ್ದು, ನಾಯಕತ್ವದ ವಿರುದ್ಧ ಧ್ವನಿಗಳು ಹೆಚ್ಚಾಗುತ್ತಿರುವುದಾಗಿ ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ.

ಇದರ ನಡುವೆಯೇ, ಪಶ್ಚಿಮ ಬಂಗಾಳದಲ್ಲಿ ಟಿಎಂಸಿಯ ಕೆಲ ಸಂಸದರು ಪ್ರತ್ಯೇಕ ಗುಂಪು ರಚಿಸುವ ಕುರಿತು ಚರ್ಚೆ ನಡೆಸುತ್ತಿದ್ದಾರೆ ಎಂಬ ವರದಿಗಳು ಹರಿದಾಡುತ್ತಿವೆ. ಲೋಕಸಭೆಯಲ್ಲಿ ಟಿಎಂಸಿಗೆ ಒಟ್ಟು 28 ಸಂಸದರು ಇದ್ದು, ಅವರಲ್ಲಿ 20 ಮಂದಿ ಪ್ರತ್ಯೇಕ ವ್ಯವಸ್ಥೆ ಕಲ್ಪಿಸುವಂತೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದಿದ್ದಾರೆ ಎಂದು ಹೇಳಲಾಗಿದೆ.

ಬಂಡಾಯದ ಸಾಲಿನಲ್ಲಿ ಕಾಕೋಲಿ ಘೋಷ್ ಅವರೊಂದಿಗೆ ಶತಾಬ್ದಿ ರಾಯ್, ಬಾಪಿ ಹಲ್ಡರ್, ಅರೂಪ್ ಚಕ್ರವರ್ತಿ, ಜೂನ್ ಮಾಲಿಯಾ, ದೀಪಕ್ ಅಧಿಕಾರಿ (ದೇವ್), ಕಲಿಪಾದ ಸರೆನ್, ಜಗದೀಶ್ ಬಸುನಿಯಾ, ಅಸಿತ್ ಮಲ್, ಅಬು ತಾಹಿರ್ ಖಾನ್, ಖಲೀಕುರ್ ರೆಹಮಾನ್, ಶರ್ಮಿಳಾ ಸರ್ಕಾರ್, ಪ್ರಸೂನ್ ಬ್ಯಾನರ್ಜಿ ಹಾಗೂ ಪಾರ್ಥ ಭೌಮಿಕ್ ಸೇರಿದಂತೆ ಹಲವು ಸಂಸದರ ಹೆಸರುಗಳು ಕೇಳಿಬರುತ್ತಿವೆ.

ಪಕ್ಷದೊಳಗಿನ ಈ ಬೆಳವಣಿಗೆಗಳು ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿಗೆ ಹೊಸ ಸವಾಲುಗಳನ್ನು ಸೃಷ್ಟಿಸಿದ್ದು, ಮುಂದಿನ ದಿನಗಳಲ್ಲಿ ಪಶ್ಚಿಮ ಬಂಗಾಳ ರಾಜಕೀಯದಲ್ಲಿ ಮಹತ್ವದ ಬದಲಾವಣೆಗಳಿಗೆ ಕಾರಣವಾಗುವ ಸಾಧ್ಯತೆ ಇದೆ.

Share with Friends
author avatar
News Desk