
ಬಿಡದಿ ಹೋರಾಟಗಾರರ ವಿರುದ್ಧ ಎಫ್ಐಆರ್ ರದ್ದು ಮಾಡಿ
ವಿಜಯಪುರ, ಜು.14: ಬಿಡದಿ ಟೌನ್ಶಿಪ್ ಹೋರಾಟಗಾರರ ಮೇಲೆ ಸರ್ಕಾರ ದಾಖಲಿಸಿರುವ ಎಫ್ ಐಆರ್ ರದ್ದುಪಡಿಸಬೇಕೆಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರ್ ಸ್ವಾಮಿ ಆಗ್ರಹಿಸಿದ್ದಾರೆ.

ಅಮಾಯಕ ರೈತರ ಮೇಲೆ ಎಫ್ ಐಆರ್ ದಾಖಲಿಸಿರುವ ಕಾಂಗ್ರೆಸ್ ಸರ್ಕಾರದ ದೌರ್ಜನ್ಯವನ್ನು ತೀವ್ರವಾಗಿ ಖಂಡಿಸಿದ್ದಾರೆ. ಯಾವುದೇ ಮಾಹಿತಿಯಿಲ್ಲದೆ ರೈತರ ಭೂಮಿಗೆ ನುಗ್ಗಿ ಜಂಟಿ ಮಾಪನ ಮಾಡಲು ಅಧಿಕಾರಿಗಳು ಮುಂದಾಗಿದ್ದರು. ಅದನ್ನು ಪ್ರಶ್ನಿಸಿದ ರೈತರ ಹೋರಾಟವನ್ನು ಹತ್ತಿಕ್ಕಲು ಜನವಿರೋಧಿ ಸರ್ಕಾರ ಎಫ್ ಐಆರ್ ಅಸ್ತ್ರ ಬಳಸಿ ಬೆದರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಸರ್ಕಾರದ ದಬ್ಬಾಳಿಕೆಗೆ ರೈತರು ಹೆದರುವ ಅಗತ್ಯವಿಲ್ಲ. ನ್ಯಾಯ ಯುತ ಹೋರಾಟಕ್ಕೆ ಅಗತ್ಯವಿರುವ ಕಾನೂನು ನೆರವು ಹಾಗೂ ಬೆಂಬಲ ನೀಡಲು ನಾವೆಲ್ಲರೂ ನಿಮ್ಮ ಜೊತೆ ಇರಲು ಸಿದ್ಧರಿದ್ದೇವೆ. ಎರಡು ದಿನದಲ್ಲಿ ರೈತರ ಮೇಲೆ ದಾಖಲಿಸಿರುವ ಸುಳ್ಳು ಎಫ್ ಐಆರ್ ರದ್ದುಪಡಿಸಿ ವಶಕ್ಕೆ ಪಡೆದಿರುವ ಅಮಾಯಕ ರೈತರನ್ನು ತಕ್ಷಣ ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ಜನವಿರೋಧಿ ಸರ್ಕಾರದ ವಿರುದ್ಧ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ
