BlogLatestTop Storiesರಾಜಕೀಯ | Politicsರಾಜ್ಯ-Karnataka

ವಕ್ಫ್ ಆಸ್ತಿಯನ್ನ ಅಕ್ಬರ್, ಔರಂಗಜೇಬ್, ಜಿನ್ನಾ ಬಿಟ್ಟು ಹೋಗಿದ್ರಾ..? : ಪ್ರತಾಪ್ ಸಿಂಹ ಪ್ರಶ್ನೆ

ಮೈಸೂರು: ಮುಸ್ಲಿಮರು ವಕ್ಫ್ ಆಸ್ತಿ ಅಂತಾರಲ್ಲ, ಅದು ಅವರಿಗೆ ಯಾರಿಂದ ಬಂತು? ಅಕ್ಬರ್, ಔರಂಗಜೇಬ್ ಜಿನ್ನಾ ಅಥವಾ ಯಾರಾದರೂ ಸೌದಿಯ ಮುಲ್ಲಾಗಳು ಕೊಟ್ಟ ಆಸ್ತಿನಾ ಇದು? ಪ್ರತ್ಯೇಕ ಆಸ್ತಿ ಮುಸ್ಲಿಮರಿಗೆ ಎಲ್ಲಿಂದ ಬಂತು. ಯಾರಿಂದ ಅವರಿಗೆ ಬಳುವಳಿಯಾಗಿ ಬಂದಿದ್ದು ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದರು.

ಮೈಸೂರಿನ ಹುಣಸೂರಿನಲ್ಲೂ ಗಣೇಶ ದೇವಾಲಯದ 17 ಎಕರೆ ನಮ್ಮದು ಅಂತಾ ವಕ್ಫ್ ಬೋರ್ಡ್ ಕೂತಿದೆ. ಚಿಕ್ಕಮಗಳೂರಿನಲ್ಲೂ ಇದೇ ಕಥೆ ಆಗಿದೆ. ಕಂಡವರ ಜಮೀನಿಗೆಲ್ಲಾ ಮುಲ್ಲಾಗಳು ನೋಟಿಸ್ ಕೊಡುತ್ತಾ, ಇದು ನಮ್ಮದು ಅಂತಿದ್ದಾರೆ. ವಕ್ಫ್ ಬೋರ್ಡ್ ಜಮೀನಿನಲ್ಲಿ ಮುಸ್ಲಿಮರಿಗೆ ಉಳುಮೆ ಮಾಡಲು ಅವಕಾಶ ಕೊಟ್ಟಿದ್ದೀರಾ? ನಮ್ಮ ದೇವಾಲಯ, ಮಠಗಳಲ್ಲಿ ಹಾಕುವಂತೆ ಯಾವತ್ತಾದರೂ ಮಸೀದಿ ಚರ್ಚ್ಗಳಲ್ಲಿ ಹಿಡಿ ಅನ್ನ ಯಾರಿಗಾದರೂ ಹಾಕಿದ್ದೀರಾ? ಎಂದು ಪ್ರಶ್ನಿಸಿದರು.

ಸಿಎಂ ಸಿದ್ದರಾಮಯ್ಯಗೆ ಮುಡಾ ಕಷ್ಟ ಎದುರಾದಾಗ ಚಾಮುಂಡಿ ತಾಯಿ, ಹಾಸನಾಂಬೆ ತಾಯಿ ನೆನಪಾಗಿದ್ದಾರೆ. ಸಿಎಂಗೆ ಕಷ್ಟ ಬಂದಾಗ ಅವರ ಸಹಾಯಕ್ಕೆ ಬರುವುದು ನಮ್ಮ ದೇವಾನುದೇವತೆಗಳೇ ಹೊರತು ಬೇರೆ ಧರ್ಮದವರಲ್ಲ. ಹೀಗಾಗಿ ಸಿಎಂ ಈಗ ಹಿಂದೂಗಳ ವಿರುದ್ದ ನಿಲುವು ತೆಗೆದುಕೊಳ್ಳವುದಿಲ್ಲ ಎಂದುಕೊಂಡಿದ್ದೇನೆ. ಪ್ರಧಾನ ಮಂತ್ರಿಗಳು ವಕ್ಫ್ ಕಾಯ್ದೆ, ವಕ್ಫ್ ಬೋರ್ಡ್ ಅನ್ನೇ ರದ್ದು ಮಾಡಬೇಕು ಎಂದರು.

ಮುಡಾ ಹಗರಣ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಇಡಿ ತನಿಖೆ ಶುರು ಮಾಡಿದ ಮೇಲೆ ಮುಡಾ ಕ್ಲೀನ್ ಆಗಬಹುದು ಎಂಬ ನಂಬಿಕೆ ಬಂದಿದೆ. 50:50 ಅನುಪಾತದಲ್ಲಿ ಅಕ್ರಮವಾಗಿ ಸೈಟ್ ಪಡೆದವರ ಎಲ್ಲಾ ಸೈಟ್ ವಾಪಸ್ ಕಿತ್ತುಕೊಳ್ಳಿ. ಮೈಸೂರಿಗೆ ಒಳ್ಳೆಯ ನಗರಾಭಿವೃದ್ಧಿ ಪ್ರಾಧಿಕಾರ ಬೇಕು. ಒಳ್ಳೆಯ ಜನಪ್ರತಿನಿಧಿಗಳು ಬೇಕು ಎಂದರು.

ಶಾಸಕ ಬಸವಗೌಡ ಪಾಟೀಲ್ ಯತ್ನಾಳ್ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಯತ್ನಾಳ್ ಬಿಜೆಪಿಯ ಜನಪ್ರಿಯ ನೇತಾರ. ಯತ್ನಾಳ್ ಅವರೇ ವಕ್ಫ್ ಬೋರ್ಡ್ ಆಕ್ರಮದ ಬಗ್ಗೆ ಮೊದಲು ಧ್ವನಿ ಎತ್ತಿದ್ದು. ವಕ್ಫ್ ಬೋರ್ಡ್ ವಿಚಾರದಲ್ಲಿ ಸತ್ಯಶೋಧನೆಗೆ ಕಣ್ತಪ್ಪಿನಿಂದ ಯತ್ನಾಳ್ ಹೆಸರು ಕೈ ಬಿಟ್ಟು ಹೋಗಿತ್ತು ಅಷ್ಟೇ ಎಂದು ಸಮರ್ಥನೆ ಮಾಡಿಕೊಂಡರು.

ಸಿಎಂ ಮೊದಲು ಕೇಸರಿ ಶಾಲು ಹಾಕಿದರೆ ಕಿತ್ತು ಬಿಸಾಕುತ್ತಿದ್ದರು. ಮುಡಾ ಪ್ರಕರಣದ ನಂತರ ಹಿಂದೂ ಧರ್ಮದ ಮೇಲೆ ನಂಬಿಕೆ ಬಂದಿದೆ. ನಮ್ಮ ದೇವರ ಮೇಲೆ ಶ್ರದ್ಧೆ, ಭಕ್ತಿ ಕೂಡ ಸಿಎಂಗೆ ಬಂದಿದೆ. ನಾನು ಕೂಡ ಯತ್ನಾಳ್ ಜೊತೆಯಲ್ಲಿ ಪ್ರತಿಭಟನೆಯಲ್ಲಿ ಭಾಗಿಯಾಗುತ್ತೇನೆ ಎಂದರು.

Share with Friends
author avatar
News Desk