
ಪಿಎಸ್ಗೆ ಕಪಾಳಮೋಕ್ಷ ಪ್ರಕರಣ : ಪುತ್ರಿ ಪರವಾಗಿ ಕ್ಷಮೆಯಾಚಿಸಿದ ಬಿಜೆಪಿ ಶಾಸಕ
ಬೆಂಗಳೂರು.ಆ.14: ಕರ್ತವ್ಯದಲ್ಲಿದ್ದ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಮೇಲೆ ತಮ್ಮ ಪುತ್ರಿ ಐಶ್ವರ್ಯಾ ಕಪಾಳಮೋಕ್ಷ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಬಿ. ಸುರೇಶ್ ಗೌಡ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭೀಮನ ಅಮಾವಾಸ್ಯೆಯ ದಿನ ತಮ್ಮ ಪುತ್ರಿ ಐಶ್ವರ್ಯಾ ಇಬ್ಬರು ಸಣ್ಣ ಮಕ್ಕಳೊಂದಿಗೆ ಆರತಿ ಉಕ್ಕಡ ದೇವಸ್ಥಾನಕ್ಕೆ ತೆರಳಿದ್ದಳು. ಆ ಸಂದರ್ಭದಲ್ಲಿ ಕರ್ತವ್ಯದಲ್ಲಿದ್ದ ಸಬ್ ಇನ್ಸ್ಪೆಕ್ಟರ್ ಅವಳನ್ನು ಒಳಗೆ ಬಿಡಲಿಲ್ಲ. ವಿಐಪಿ ಸಾಲಿನಲ್ಲಿ ನಿಂತಿದ್ದಾಗ ಬೇರೆಯವರನ್ನು ಒಳಗಡೆ ಬಿಟ್ಟಿದ್ದರು. ಕ್ರಿಯೆಗೆ ಪ್ರತಿಕ್ರಿಯೆ ಸಹಜವಾಗಿ ಇರುತ್ತದೆ. ಮಾತಿಗೆ ಮಾತು ಬೆಳೆದು ಈ ಅಹಿತಕರ ಘಟನೆ ನಡೆದಿರಬಹುದು.ಸ್ಥಳದಲ್ಲಿ ವಾಸ್ತವವಾಗಿ ಏನು ನಡೆಯಿತು ಎಂಬುದು ನನಗೆ ಪೂರ್ಣವಾಗಿ ತಿಳಿದಿಲ್ಲ ಎಂದು ತಿಳಿಸಿದರು.
ಇನ್ನು ನನ್ನ ಮಗಳ ತಪ್ಪಿದ್ದರೆ ಸಾರ್ವಜನಿಕವಾಗಿ ಕ್ಷಮೆ ಕೇಳುತ್ತೇನೆ. ಘಟನೆಯಲ್ಲಿ ನನ್ನ ಮಗಳ ಕಡೆಯ ದೂರು ಏನಿತ್ತು ಎಂಬುದನ್ನೂ ಪೊಲೀಸರು ಆಲಿಸಬೇಕಿತ್ತು.ಮಾತಿಗೆ ಮಾತು ಬೆಳೆದು, ನನ್ನ ಮಗಳು ತಾಳ್ಮೆ ಕಳೆದುಕೊಂಡಿರಬಹುದು. ನಾವು ಸಾರ್ವಜನಿಕ ಜೀವನದಲ್ಲಿರುವವರು, ಆ ರೀತಿಯಲ್ಲಿ ನಡೆದುಕೊಳ್ಳಬಾರದು ಎಂದು ಸುರೇಶ್ ಗೌಡ ಹೇಳಿದ್ದಾರೆ.
ಈ ಸಂಬಂಧ ಈಗಾಗಲೇ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ನನ್ನ ಮಗಳದ್ದು ತಪ್ಪಿದ್ದರೆ ನಾನು ಸಾರ್ವಜನಿಕವಾಗಿ ಕ್ಷಮೆ ಕೇಳಲು ಸಿದ್ಧ. ಅವಳು ಆ ಕ್ಷಣದಲ್ಲಿ ತಾಳ್ಮೆ ಕಳೆದುಕೊಂಡಿರಬಹುದು. ಆದರೆ ನಾವು ಸಾರ್ವಜನಿಕ ಜೀವನದಲ್ಲಿರುವವರು, ಈ ರೀತಿ ಎಂದಿಗೂ ನಡೆದುಕೊಳ್ಳಬಾರದು. ಹೀಗಾಗಿ ನನ್ನ ಮಗಳ ವರ್ತನೆಗಾಗಿ ನಾನೇ ಸಾರ್ವಜನಿಕವಾಗಿ ಕ್ಷಮೆ ಯಾಚಿಸುತ್ತೇನೆ ಎಂದರು.
