
ಕೇಂದ್ರದಿಂದ ಕಾಂಗ್ರೆಸ್ ರಾಜ್ಯಗಳಿಗೆ ಮಲತಾಯಿ ಧೋರಣೆ: ಸಚಿವ ಸಂತೋಷ ಲಾಡ್ ಆರೋಪ..!
ಹುಬ್ಬಳ್ಳಿ: ಕಾವೇರಿ, ಬರ ಪರಿಹಾರ ಸೇರಿದಂತೆ ವಿವಿಧ ವಿಚಾರಗಳಲ್ಲಿ ಕೇಂದ್ರ ಸರ್ಕಾರ ಕಾಂಗ್ರೆಸ್ ಇರುವ ರಾಜ್ಯಗಳಿಗೆ ಮಲತಾಯಿ ಧೋರಣೆ ಮಾಡುತ್ತಿದೆ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಆರೋಪಿಸಿದರು.ಹುಬ್ಬಳ್ಳಿಯಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಹಲವು ವಿಷಯಗಳ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದರು.
“ಸಿಎಂ ಅವರು ಬರ ವೀಕ್ಷಣೆ ಮಾಡುವಂತೆ ತಾಕೀತು ಮಾಡಿದ್ದಾರೆ. ಎಲ್ಲಾ ತಾಲೂಕಿಗೆ ಹೋಗಿ ಬರ ಅಧ್ಯಯನ ಮಾಡಿ ವರದಿ ನೀಡುತ್ತೇವೆ” ಎಂದು ಹೇಳಿದರು.ಬಿಜೆಪಿಯವರು ಬರ ಅಧ್ಯಯನ ಮಾಡ್ತಿರೋದು ಒಳ್ಳೆಯದು. ಅವರು ಅಧ್ಯಯನ ಮಾಡಿ ಕೇಂದ್ರಕ್ಕೆ ವರದಿ ನೀಡಲಿ. ಆದರೆ ಕೇಂದ್ರದಿಂದ ನಮಗೆ ಸಪೋರ್ಟ್ ಸಿಕ್ಕಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರದಿಂದ ಬೆಳೆ ಪರಿಹಾರದ ದುಡ್ಡು ಬಂದಿಲ್ಲ. ಬಿಜೆಪಿ ಆಡಳಿತವಿರುವ ರಾಜ್ಯಗಳಿಗೆ ಹೋದಷ್ಟು ಅನುದಾನ ನಮಗೆ ಬಂದಿಲ್ಲ. ಬೆಳೆ ವಿಮೆ ನಾರ್ಮ್ಸ್ ಬದಲಾವಣೆ ಆಗಬೇಕು. ರೈತರು ಮಧ್ಯಂತರ ಪರಿಹಾರ ಕೇಳ್ತಿರೋದು ಸರಿಯಿದೆ ಎಂದು ಸಚಿವರು ಹೇಳಿದರು.ಎರಡ್ಮೂರು ದಿನದಲ್ಲಿ ಖಾತೆ ಹಂಚಿಕೆ ಆಗಬಹುದು. ಯಾವ ಖಾತೆ ಸಿಗುತ್ತೋ ಅದನ್ನು ಖುಷಿಯಿಂದ ನಿರ್ವಹಣೆ ಮಾಡುತ್ತೇನೆ.

ಸಚಿವ ಸ್ಥಾನ ಸಿಗದೇ ಇರೋರಿಗೆ ಅರ್ಹತೆ ಇಲ್ಲ ಅಂತ ಅಲ್ಲ. ಎಲ್ಲರಿಗೂ ಅರ್ಹತೆ ಇದೆ. ನಾನು ಈ ವಿಚಾರದಲ್ಲಿ ಅದೃಷ್ಟವಂತ ಅಂತ ಅಂದುಕೊಂಡಿದ್ದೇನೆ ಎಂದು ಪ್ರತಿಕ್ರಿಯಿಸಿದರು.ದೇಶದಲ್ಲಿ ಬದಲಾವಣೆ ಗಾಳಿ ಬೀಸುತ್ತಿದೆ. ಜೆನ್ ಜಿ ಯಿಂದ ಹೊಸ ಬದಲಾವಣೆಗಳು ಆಗ್ತಿದೆ. ಬಿಜೆಪಿಯವರು ಫೇರ್ ಎಲೆಕ್ಷನ್ ಮಾಡಿದ್ರೆ ಅವರು ಖಂಡಿತಾ ಸೋಲ್ತಾರೆ. ಹೀಗಾಗಿ ನ್ಯಾಯಯುತ ಚುನಾವಣೆ ಮಾಡಲು ಅವರು ಬಿಡೋದಿಲ್ಲ.
ಜನರ ಪ್ರಶ್ನೆಗಳಿಗೆ ಅವರು ಉತ್ತರಿಸೋದಿಲ್ಲ. ಬದಲಾಗಿ ಧರ್ಮ, ದೇವರ ಹೆಸರಲ್ಲಿ ಮಾತ್ರ ಮಾತನಾಡುತ್ತಾರೆ ಎಂದು ಟೀಕಿಸಿದರು.ರಾಜ್ಯದಲ್ಲಿ SIR ಪ್ರಕ್ರಿಯೆಗೂ ಬೇರೆ ರಾಜ್ಯದ SIR ಪ್ರಕ್ರಿಯೆಗೂ ವ್ಯತ್ಯಾಸವಿದೆ. ನಾವು ಮಾಡೋ ಆರೋಪಕ್ಕೆ ಅಂಕಿ-ಸಂಖ್ಯೆಗಳಿವೆ.ದೇಶದ ಪ್ರಧಾನಿ ಯಾವುದಕ್ಕೂ ಉತ್ತರ ನೀಡ್ತಿಲ್ಲ. ಪ್ರಧಾನಿ ರಿಲೀಫ್ ಫಂಡ್ಗೆ ನೀಡಿದ 20 ಸಾವಿರ ಕೋಟಿ ಬಗ್ಗೆ ಉತ್ತರ ನೀಡ್ತಿಲ್ಲ. ಹಾಗಾದ್ರೆ ಆ ದುಡ್ಡಿನ ಬಗ್ಗೆ ಯಾರು ಕೇಳಬೇಕು..?
ಬಿಜೆಪಿಯವರು ಕಾಂಗ್ರೆಸ್ನ ಎಪ್ಪತ್ತು ವರ್ಷದ ಲೆಕ್ಕ ಕೇಳ್ತಾರೆ. ಆದರೆ 20 ಸಾವಿರ ಕೋಟಿ ಬಗ್ಗೆ ಇಲ್ಲಿವರಗೆ ಉತ್ತರ ನೀಡ್ತಿಲ್ಲ. ಹಾರಿಕೆ ಉತ್ತರ ಕೊಡೋದರಲ್ಲಿ ಅವರು ಎಕ್ಸಪರ್ಟ್. ಭ್ರಷ್ಟಾಚಾರದಲ್ಲಿ ಇಡೀ ದೇಶವನ್ನೇ ಮುಳುಗಿಸಿದ್ದಾರೆ. ಬಿಜೆಪಿ ಆಡಳಿತವಿರೋ ರಾಜ್ಯಗಳಲ್ಲಿ ದೊಡ್ಡ ಅಭಿವೃದ್ಧಿ ಆಗಿದೆ ಅಂತ ಬಿಂಬಿಸುತ್ತಾರೆ ಎಂದು ವಾಗ್ದಾಳಿ ನಡೆಸಿದರು.
