
ಮಳೆಗಾಗಿ ಹಳೇ ಕಾಲದ ವಿಶಿಷ್ಟ ಸಂಪ್ರದಾಯಕ್ಕೆ ಮೊರೆ!
ಗದಗ : ವರುಣ ದೇವನ ಕೃಪೆಗಾಗಿ ಕಾಯುತ್ತಿರುವ ಅನ್ನದಾತರು, ಈಗ ಆಧುನಿಕತೆಯ ನಡುವೆಯೂ ಮಳೆಗಾಗಿ ಹಳೇ ಕಾಲದ ವಿಶಿಷ್ಟ ಸಂಪ್ರದಾಯಗಳಿಗೆ ಮೊರೆ ಹೋಗುತ್ತಿದ್ದಾರೆ. ರಾಜ್ಯದ ಹಲವು ಭಾಗಗಳಲ್ಲಿ ಸಕಾಲಕ್ಕೆ ಮಳೆಯಾಗದ ಹಿನ್ನೆಲೆಯಲ್ಲಿ, ರೈತರು ಒಟ್ಟುಗೂಡಿ ತಮ್ಮ ಹಿರಿಯರ ಕಾಲದ ಸಾಂಪ್ರದಾಯಿಕ ಗುರ್ಜಪ್ಪನ ಪೂಜೆ ಯನ್ನು ಭಕ್ತಿ-ಶ್ರದ್ಧೆಯಿಂದ ನೆರವೇರಿಸುತ್ತಿದ್ದಾರೆ.
ಮಳೆ ಕೈಕೊಟ್ಟಾಗ ಪ್ರಕೃತಿಯನ್ನು ಶಾಂತಗೊಳಿಸಲು ಮತ್ತು ವರುಣ ದೇವನನ್ನು ಒಲಿಸಿಕೊಳ್ಳಲು ಗ್ರಾಮೀಣ ಭಾಗದಲ್ಲಿ ಈ ಆಚರಣೆ ಮಾಡಲಾಗುತ್ತದೆ. ಕೆಸರಿನಿಂದ ಅಥವಾ ಸಗಣಿಯಿಂದ ಸಣ್ಣದೊಂದು ಬೊಂಬೆ ಅಥವಾ ಲಿಂಗದಂತಹ ಆಕೃತಿಯನ್ನು ಸಿದ್ಧಪಡಿಸಿ, ಅದಕ್ಕೆ ಹೂವು, ಎಲೆಗಳಿಂದ ಶೃಂಗಾರ ಮಾಡಲಾಗುತ್ತದೆ.

ಗ್ರಾಮದ ಹೆಣ್ಣುಮಕ್ಕಳು ಮತ್ತು ರೈತರು ಈ ಗುರ್ಜಿಯನ್ನು ಬುಟ್ಟಿಯಲ್ಲಿಟ್ಟುಕೊಂಡು, ತಲೆಯ ಮೇಲೆ ಹೊತ್ತು ಗ್ರಾಮದ ಪ್ರತಿ ಮನೆ ಮನೆಗೂ ಮೆರವಣಿಗೆಯ ಮೂಲಕ ಸಾಗುತ್ತಾರೆ.
ಗುರ್ಜಿ ಮನೆ ಬಾಗಿಲಿಗೆ ಬಂದಾಗ ಸೌಭಾಗ್ಯವತಿಯರು ಅದಕ್ಕೆ ನೀರು ಸುರಿದು, ಆರತಿ ಬೆಳಗಿ, ಪೂಜೆ ಸಲ್ಲಿಸುತ್ತಾರೆ. ಜೊತೆಗೆ ಗುರ್ಜಪ್ಪನಿಗೆ ಧಾನ್ಯ, ಕಾಳು ಹಾಗೂ ದಕ್ಷಿಣೆಯನ್ನು ನೀಡಿ ಮಳೆ ಬರಲಿ ಎಂದು ಪ್ರಾರ್ಥಿಸುತ್ತಾರೆ.
ಮೆರವಣಿಗೆಯ ಉದ್ದಕ್ಕೂ ಗ್ರಾಮೀಣ ಮಹಿಳೆಯರು ಮತ್ತು ಹಿರಿಯರು ಮಳೆರಾಯನನ್ನು ಕರೆಯುವ ಜಾನಪದ ಗೀತೆಗಳನ್ನು ಹಾಡುತ್ತಾರೆ. “ಬಾರೋ ಬಾರೋ ಮಳೆರಾಯ, ಬೆಳೆದು ನಿಂತಾವೆ ನಮ್ಮ ಕಾಯ” ಎಂಬ ಸಾಲುಗಳು ಇಡೀ ಗ್ರಾಮದಲ್ಲಿ ಮೊಳಗುತ್ತಿರುತ್ತವೆ. ಸಂಗ್ರಹವಾದ ಧಾನ್ಯ ಮತ್ತು ಹಣದಿಂದ ಕೊನೆಯಲ್ಲಿ ಗ್ರಾಮದ ದೇವಸ್ಥಾನದಲ್ಲಿ ವಿಶೇಷ ಅನ್ನದಾನ ಅಥವಾ ಪೂಜಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತದೆ.

“ನಾವು ಏನೇ ತಂತ್ರಜ್ಞಾನ ಬೆಳೆದಿದ್ದರೂ ಪ್ರಕೃತಿಯ ಮುಂದೆ ಮನುಷ್ಯ ಕುಬ್ಜ. ಮುಂಗಾರು ಕೈಕೊಟ್ಟರೆ ನಮಗೆ ದಿಕ್ಕೇ ತೋಚುವುದಿಲ್ಲ. ಅದಕ್ಕಾಗಿಯೇ ನಮ್ಮ ಹಿರಿಯರು ಮಾಡಿಕೊಂಡು ಬಂದ ಗುರ್ಜಿ ಪೂಜೆಯನ್ನು ನಾವಿಂದು ಮಾಡಿದ್ದೇವೆ. ಗುರ್ಜಪ್ಪ ನಮಗೆ ಖಂಡಿತ ಮಳೆ ತರುತ್ತಾನೆಂಬ ನಂಬಿಕೆ ಇದೆ,” ಎಂದು ಸ್ಥಳೀಯ ರೈತರೊಬ್ಬರು ಆಶಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಆದರಹಳ್ಳಿ ಗ್ರಾಮದ ರೈತರು, ಗುರುಹಿರಿಯರು ತಾಯಂದಿರು ಮುಂತಾದವರು ಇದ್ದರು.
