LatestTop Storiesಕೋಲಾರ-Kolara

ಒಣಗಿದ ಚಿನ್ನದ ನಾಡು; ಕೋಲಾರದ ರೈತ ಕಣ್ಣೀರು ..!

ಕೋಲಾರ ಜಿಲ್ಲೆಯಲ್ಲಿ ಬರಗಾಲದ ತೀವ್ರತೆ ಮಿತಿಮೀರಿದ್ದು, ಬಂಗಾರಪೇಟೆಯ ಕಾಮಸಮುದ್ರ ಹಾಗೂ ಮುಳಬಾಗಿಲಿನ ದುಗ್ಗಸಂದ್ರ ಹೋಬಳಿಯ ಜನತೆ ಬದುಕಿಗಾಗಿ ಹೋರಾಡುವಂತಾಗಿದೆ. ಮಳೆರಾಯ ಕೈಕೊಟ್ಟ ಹಿನ್ನೆಲೆಯಲ್ಲಿ ಕೆರೆ-ಕುಂಟೆಗಳು ಸಂಪೂರ್ಣ ಬತ್ತಿ ಹೋಗಿದ್ದು, ಜಾನುವಾರುಗಳಿಗೆ ಮೇವಿಲ್ಲದೆ, ಜನರಿಗೆ ಕುಡಿಯಲು ನೀರಿಲ್ಲದೆ ಇಡೀ ಹಳ್ಳಿಗಳೇ ಕಣ್ಣೀರಲ್ಲಿ ಮುಳುಗಿವೆ.

ಹಸಿರಾಗಬೇಕಿದ್ದ ಹೊಲಗಳು ಈಗ ಸಂಪೂರ್ಣವಾಗಿ ಒಣಗಿ ಕರಕಲಾಗಿವೆ. ಬಂಗಾರಪೇಟೆಯ ಕಾಮಸಮುದ್ರ ಮತ್ತು ಮುಳಬಾಗಿಲಿನ ದುಗ್ಗಸಂದ್ರ ಹೋಬಳಿಯಲ್ಲಿ ಈ ಬಾರಿ ಮುಂಗಾರು ಮಳೆ ಸಂಪೂರ್ಣ ಕೈಕೊಟ್ಟಿದೆ. ಬಿತ್ತನೆ ಮಾಡಲು ಆಕಾಶದ ಕಡೆಗೆ ಮುಖ ಮಾಡಿ ಕಾಯುವಂತಾಗಿದೆ.

ಒಣಗಿದ ಚಿನ್ನದ ನಾಡು ಕೋಲಾರದ ರೈತ ಕಣ್ಣೀರು

ಇಲ್ಲಿ ಬದುಕು ಎಷ್ಟು ದುಸ್ತರವಾಗಿದೆ ಎಂದರೆ, ಗ್ರಾಮಸ್ಥರು ಬಾಯಾರಿಕೆ ನೀಗಿಸಿಕೊಳ್ಳಲು ನಿತ್ಯ 2 ರಿಂದ 3 ಕಿಲೋಮೀಟರ್ ದೂರ ನಡೆದುಕೊಂಡು ಹೋಗಬೇಕಾದ ಅನಿವಾರ್ಯತೆ ಎದುರಾಗಿದೆ. ಕಾಮಸಮುದ್ರ ಭಾಗದಲ್ಲಿ ಬರೋಬ್ಬರಿ 1300 ಅಡಿ ಆಳಕ್ಕೆ ಕೊರೆದರೂ ಶೇಕಡಾ 90 ರಷ್ಟು ಬೋರ್‌ವೆಲ್‌ಗಳು ಫೇಲ್ ಆಗಿವೆ. ಭೂಮಿಯ ಒಡಲಿನಲ್ಲಿ ಹನಿ ನೀರೂ ಸಿಗುತ್ತಿಲ್ಲ. ಸಿಕ್ಕ ಅಲ್ಪಸ್ವಲ್ಪ ಕಲುಷಿತ ನೀರನ್ನೇ ಕುಡಿದು ಹಳ್ಳಿಗಳ ಜನರಲ್ಲಿ ವಾಂತಿ, ಭೇದಿ ಹಾಗೂ ಚರ್ಮ ರೋಗಗಳು ಉಲ್ಬಣಿಸುತ್ತಿವೆ.

ತಮ್ಮ ಒಡಹುಟ್ಟಿದವರಂತೆ ಸಾಕಿದ ಹಸು, ಕರು, ಕುರಿ ಮತ್ತು ಎಮ್ಮೆಗಳಿಗೆ ಕುಡಿಯಲು ನೀರಿಲ್ಲ, ತಿನ್ನಲು ಮೇವೂ ಇಲ್ಲದಂತಾಗಿದೆ. ಕಣ್ಣೆದುರೇ ಮೂಕ ಜೀವಿಗಳು ಹಸಿವಿನಿಂದ ನರಳುತ್ತಿರುವುದನ್ನು ನೋಡಲಾಗದ ರೈತರು, ಭಾರವಾದ ಹೃದಯದಿಂದ ಜಾನುವಾರುಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಹಳ್ಳಿಗಳಲ್ಲಿ ಬದುಕು ಸಾಗಿಸಲು ಯಾವುದೇ ಕೂಲಿ ಕೆಲಸ ಸಿಗದೆ, ಹಲವರು ಮನೆಗಳಿಗೆ ಬೀಗ ಹಾಕಿ ಬೆಂಗಳೂರಿನತ್ತ ವಲಸೆ ಹೋಗುತ್ತಿದ್ದಾರೆ. ಹಳ್ಳಿಗಳು ಸಂಪೂರ್ಣವಾಗಿ ಖಾಲಿಯಾಗುವ ಭೀತಿ ಎದುರಾಗಿದೆ.

ಪರಿಸ್ಥಿತಿ ಇಷ್ಟೊಂದು ಭೀಕರವಾಗಿದ್ದರೂ, ಅಧಿಕಾರಿಗಳು ಮತ್ತು ಸರ್ಕಾರ ಮಾತ್ರ ಕಣ್ಣು ಮುಚ್ಚಿ ಕುಳಿತಿದೆ. ತಕ್ಷಣವೇ ಸರ್ಕಾರ ಎಚ್ಚೆತ್ತುಕೊಂಡು ಟ್ಯಾಂಕರ್ ಮೂಲಕ ನೀರು ಪೂರೈಸಬೇಕು, ಮೇವಿಗೆ ಸಬ್ಸಿಡಿ ನೀಡಬೇಕು ಮತ್ತು ಕೋಲಾರ ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿ ತಕ್ಷಣದ ಪರಿಹಾರ ನೀಡಬೇಕು ಎನ್ನುವುದು ನೊಂದ ಹಳ್ಳಿಗರ ಕೊನೆಯ ಆಸೆಯಾಗಿದೆ.

Share with Friends
author avatar
Digital Desk