Crime NewsEntertainmentLatestರಾಷ್ಟ್ರೀಯ-National

ಪುಣೆಯಲ್ಲಿ ನೋಡ ನೋಡುತ್ತಿದ್ದಂತೆ ನೀರಿನಲ್ಲಿ ಕೊಚ್ಚಿ ಹೋದ ಒಂದೇ ಕುಟುಂಬ- ಐವರು ಸಾವು

ಮುಂಬೈ: ಲೋನಾವಾಲಾದ (Lonavala) ಭೂಶಿ ಅಣೆಕಟ್ಟಿನ (Bhushi Dam) ನೀರಿನಲ್ಲಿ ಕೊಚ್ಚಿಹೋಗಿ ಐವರು ಸಾವನ್ನಪಿದ ಘಟನೆ ಮಹಾರಾಷ್ಟ್ರದಲ್ಲಿ (Maharashtra) ಭಾನುವಾರ ಮಧ್ಯಾಹ್ನ ನಡೆದಿದೆ. ಘಟನೆಯಲ್ಲಿ ಮಕ್ಕಳು ಮತ್ತು ಮಹಿಳೆ ಸೇರಿದಂತೆ ಐದು ಜನರು ನೀರಿನಲ್ಲಿ ಸಿಲುಕಿ ಸಾವನ್ನಪ್ಪಿದ್ದು, ಇನ್ನೂ ಐವರು ಈಜಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತರನ್ನು ಸಹಿಸ್ತಾ ಲಿಯಾಕತ್ ಅನ್ಸಾರಿ (36), ಅಮಿಮಾ ಆದಿಲ್ ಅನ್ಸಾರಿ (13), ಉಮೇರಾ ಅಲಿಯಾಸ್ ಸಲ್ಮಾನ್ ಆದಿಲ್ ಅನ್ಸಾರಿ (8) ಎಂದು ಪೊಲೀಸರ ಮಾಹಿತಿಯ ಪ್ರಕಾರ ಗುರುತಿಸಲಾಗಿದೆ.

https://youtu.be/5baaPtkP0Q4?si=95odJccaU8e80zcQ

ಘಟನೆಯಲ್ಲಿ ಇನ್ನೂ ಇಬ್ಬರು ಕಾಣೆಯಾಗಿದ್ದಾರೆ. ನಾಪತ್ತೆಯಾದವರನ್ನು ಅದ್ನಾನ್ ಶಾಬತ್ ಅನ್ಸಾರಿ (4), ಮತ್ತು ಮರಿಯಾ ಅನ್ಸಾರಿ (9) ಎಂದು ಗುರುತಿಸಲಾಗಿದ್ದು, ಇಂದು (ಸೋಮವಾರ) ಶೋಧ ಕಾರ್ಯಾಚರಣೆ ಮುಂದುವರಿದಿದೆ.

ಭಾನುವಾರ ಪುಣೆಯ ಹಡಪ್ಸರ್‌ನ ಲಿಯಾಕತ್ ಅನ್ಸಾರಿ ಮತ್ತು ಯೂನಸ್ ಖಾನ್ ಅವರ ಕುಟುಂಬ ಸದಸ್ಯರು ಭೂಶಿ ಅಣೆಕಟ್ಟಿಗೆ ಭೇಟಿ ನೀಡಿದ್ದರು. ಎಡೆಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಏಕಾಏಕಿ ನೀರಿನ ಮಟ್ಟ ಹೆಚ್ಚಾದ ಪರಿಣಾಮ 10 ಮಂದಿ ಕುಟುಂಬದವರು ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದಾರೆ. ಈ ಪೈಕಿ ಐವರು ಈಜಿ ಪ್ರಾಣ ಕಾಪಾಡಿಕೊಂಡಿದ್ದು, 5 ಮಂದಿ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ.

ಪರಿಸ್ಥಿತಿಯ ಗಂಭೀರತೆಯನ್ನು ಪರಿಗಣಿಸಿ, ಸ್ಥಳೀಯ ಪೊಲೀಸರು, ಅಗ್ನಿಶಾಮಕ ದಳದ ಸೇವೆಗಳು, ಶಿವದುರ್ಗ ಮಿತ್ರ ಮಂಡಲ್, ಆಪಾದ ಮಿತ್ರ ಮಾವಲ್ ಮತ್ತು ವನ್ಯ ಜೀವ್ ರಕ್ಷಣಾ ತಂಡ ಸ್ಥಳಕ್ಕೆ ಧಾವಿಸಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು. ದಿನದ ಅಂತ್ಯದ ವೇಳೆಗೆ, ಅಧಿಕಾರಿಗಳು ಮೂರು ಮೃತ ದೇಹಗಳನ್ನು ಹೊರತೆಗೆದಿದ್ದಾರೆ. ಇನ್ನೂ ಇಬ್ಬರಿಗಾಗಿ ಹುಡುಕಾಟ ಮುಂದುವರಿದಿದೆ.

ಈ ಪ್ರದೇಶದಲ್ಲಿ ಮುಂಗಾರು ಪ್ರಾರಂಭವಾದ ನಂತರ, ಭೂಶಿ ಅಣೆಕಟ್ಟು, ಘುಬಾದ್ ತಲಾಬ್, ಟಾಟಾ ಅಣೆಕಟ್ಟು, ತುಂಗರ್ಲಿ ಅಣೆಕಟ್ಟು, ರಾಜ್ಮಾಚಿ ಪಾಯಿಂಟ್, ಕುನೆಗಾಂವ್, ಕುರ್ವಂಡೆ ಪಾಯಿಂಟ್‌ಗಳಿಗೆ ಭೇಟಿ ನೀಡುವಾಗ ಪ್ರವಾಸಿಗರು ಜಾಗರೂಕರಾಗಿರಲು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

https://youtu.be/rt3ioEj0hMQ?si=lpmNKPQggMhH_1V3

ಭಾರತೀಯ ಹವಾಮಾನ ಇಲಾಖೆ ಪ್ರಕಾರ, ಪುಣೆ ಜಿಲ್ಲೆಯ ಘಾಟ್ ಪ್ರದೇಶಗಳಲ್ಲಿ ಮಳೆಯ ಚಟುವಟಿಕೆಯು ಗಣನೀಯವಾಗಿ ಹೆಚ್ಚಾಗಿದೆ. ಲೋನಾವಾಲಾದಲ್ಲಿ ಜೂನ್ 30ರಂದು 163 ಮಿ.ಮೀ ಮಳೆಯಾಗಿದೆ.

Share with Friends
author avatar
News Desk