
ಬರಪೀಡಿತ ಪ್ರದೇಶ ಘೋಷಣೆ ಮತ್ತು ಬೆಳೆ ಪರಿಹಾರಕ್ಕಾಗಿ ಬೃಹತ್ ಪ್ರತಿಭಟನೆ – ತಾಳಿಕೋಟೆಯಲ್ಲಿ ರಸ್ತೆ ರೋಕೋ
ವಿಜಯಪುರ: ವಿಜಯಪುರ ಜಿಲ್ಲೆಯನ್ನು ಕೂಡಲೇ ಬರಪೀಡಿತ ಪ್ರದೇಶ ಎಂದು ಘೋಷಿಸಿ, ರೈತರಿಗೆ ಸೂಕ್ತ ಬೆಳೆ ಪರಿಹಾರ ಮತ್ತು ನೀರಾವರಿ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ತಾಳಿಕೋಟೆಯಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.ಮಾಜಿ ಶಾಸಕ ಎಸ್. ಪಾಟೀಲ್ ನಡಹಳ್ಳಿ ಅವರ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ಸಾವಿರಾರು ರೈತರು ಮತ್ತು ಜನರು ಭಾಗಿಯಾಗಿದ್ದರು.
ತಾಳಿಕೋಟೆ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ರಸ್ತೆ ರೋಕೋ ಚಳುವಳಿ ನಡೆಸಲಾಯಿತು. ರೈತರ ನೋವಿಗೆ ಸ್ಪಂದಿಸುವಂತೆ ಆಗ್ರಹಿಸಿ ಪ್ರತಿಭಟನಾಕಾರರು ರಸ್ತೆಯಲ್ಲಿ ಕುಳಿತು ಘೋಷಣೆಗಳನ್ನು ಕೂಗಿದರು. ಪ್ರತಿಭಟನೆಗೆ ಹರಿದುಬಂದ ಜನಸಾಗರದಿಂದಾಗಿ ತಾಳಿಕೋಟೆ ಪಟ್ಟಣದ ಸಂಚಾರ ಅಸ್ತವ್ಯಸ್ತಗೊಂಡಿತು.

ಪ್ರತಿಭಟನೆಯಲ್ಲಿ ಮಾತನಾಡಿದ ಮುಖಂಡರು, ಮಳೆ ಕೈಕೊಟ್ಟು ಬೆಳೆ ಕೈಬಿಟ್ಟಾಗ, ಅನ್ನದಾತನ ಕಣ್ಣೀರನ್ನು ಒರೆಸಬೇಕಾದ ಜವಾಬ್ದಾರಿ ಸರ್ಕಾರದ್ದಾಗಿದೆ. ಡಿಕೆ ಶಿವಕುಮಾರ್ ನೇತೃತ್ವದ ಸರ್ಕಾರ ರೈತನ ನೋವಿನ ಬದುಕಿಗೆ ಆಸರೆಯಾಗಬೇಕು ಎಂದು ಒತ್ತಾಯಿಸಿದರು.
ರೈತರ ಪರವಾಗಿ ಪ್ರತಿಭಟನಾಕಾರರು ಈ ಕೆಳಗಿನ ಬೇಡಿಕೆಗಳನ್ನು ಮುಂದಿಟ್ಟರು:
- ವಿಜಯಪುರ ಜಿಲ್ಲೆಯನ್ನು ತಕ್ಷಣ ಬರಪೀಡಿತ ಪ್ರದೇಶ* ಎಂದು ಘೋಷಿಸಬೇಕು
- ಶಾಶ್ವತ ನೀರಾವರಿ ಯೋಜನೆಗಳನ್ನು ಜಾರಿಗೊಳಿಸಬೇಕು
- ಸಮರ್ಪಕ ಬರ ಪರಿಹಾರ ಮತ್ತು ಬೆಳೆ ವಿಮೆ ಹಣವನ್ನು ರೈತರ ಖಾತೆಗೆ ತಕ್ಷಣ ಜಮಾ ಮಾಡಬೇಕು
- ರೈತ ಸಾಲದ ಹೊರೆ ಕಡಿಮೆ ಮಾಡಿ, ತನ್ನ ಜಮೀನಿನಲ್ಲೇ ಗೌರವದಿಂದ ಬದುಕುವ ಅವಕಾಶ ಕಲ್ಪಿಸಬೇಕು
ಅನ್ನ ನೀಡುವ ಕೈಗಳಿಗೆ ನೆರವಾಗುವುದು ದಯೆಯಲ್ಲ — ಅದು ಸರ್ಕಾರದ ಕರ್ತವ್ಯ, ಸಮಾಜದ ಜವಾಬ್ದಾರಿ. ರೈತನ ಬದುಕಿಗಾಗಿ, ನೀರಿಗಾಗಿ, ಬೆಳೆಗಾಗಿ, ನ್ಯಾಯಕ್ಕಾಗಿ — ಈ ಹೋರಾಟ ಎಂದು ಮಾಜಿ ಶಾಸಕ ಎಸ್. ಪಾಟೀಲ್ ನಡಹಳ್ಳಿ ಹೇಳಿದರು.ಜಿಲ್ಲೆಯಲ್ಲಿ ಕಳೆದ ಹಲವು ವರ್ಷಗಳಿಂದ ಮಳೆ ಕೊರತೆ ಉಂಟಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈಗಾಗಲೇ ಬೆಳೆ ನಷ್ಟ ಅನುಭವಿಸಿರುವ ರೈತರಿಗೆ ಸರ್ಕಾರ ತಕ್ಷಣ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಇನ್ನೂ ದೊಡ್ಡ ಮಟ್ಟದ ಹೋರಾಟ ನಡೆಸುವುದಾಗಿ ಅವರು ಎಚ್ಚರಿಕೆ ನೀಡಿದರು.
