
ಸಚಿವ ಬಿ. ನಾಗೇಂದ್ರಗೆ ಹೈಕೋರ್ಟ್ ರಿಲೀಫ್, ರಾಜ್ಯದಿಂದ ಹೊರಹೋಗುವ ನಿರ್ಬಂಧಕ್ಕೆ ತಡೆ
ಬೆಂಗಳೂರು: ಸಚಿವ ಬಿ. ನಾಗೇಂದ್ರ ಅವರಿಗೆ ಕರ್ನಾಟಕ ಹೈಕೋರ್ಟ್ ಬಿಗ್ ರಿಲೀಫ್ ನೀಡಿದೆ. ಜಾಮೀನು ನೀಡುವ ವೇಳೆ ವಿಧಿಸಲಾಗಿದ್ದ ರಾಜ್ಯದಿಂದ ಹೊರಹೋಗಬಾರದು ಎಂಬ ಷರತ್ತಿಗೆ ಹೈಕೋರ್ಟ್ ತಡೆ ನೀಡಿದೆ.
ಹೈಕೋರ್ಟ್ ತನ್ನ ಹಿಂದಿನ ಆದೇಶವನ್ನು ಮಾರ್ಪಡಿಸಿದ್ದು, ನಾಗೇಂದ್ರ ಅವರಿಗೆ ಜಾಮೀನು ನೀಡುವ ಸಂದರ್ಭದಲ್ಲಿ ವಿಧಿಸಿದ್ದ ಷರತ್ತುಗಳ ಪೈಕಿ ರಾಜ್ಯದ ಗಡಿ ದಾಟದಂತೆ ವಿಧಿಸಿದ್ದ ನಿರ್ಬಂಧವನ್ನು ತಾತ್ಕಾಲಿಕವಾಗಿ ತಡೆಹಿಡಿದಿದೆ.
ಆದರೆ, ದೇಶದಿಂದ ಹೊರಗೆ ತೆರಳಲು ನಾಗೇಂದ್ರ ಅವರು ನ್ಯಾಯಾಲಯದ ಪೂರ್ವಾನುಮತಿ ಪಡೆಯುವುದು ಕಡ್ಡಾಯ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಇದೇ ವೇಳೆ, ಈ ವಿಚಾರಕ್ಕೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಲು ಜಾರಿ ನಿರ್ದೇಶನಾಲಯಕ್ಕೆ (ED) ಆಗಸ್ಟ್ 12ರವರೆಗೆ ಕಾಲಾವಕಾಶ ನೀಡಲಾಗಿದೆ.
ದೆಹಲಿಗೆ ತೆರಳಲು ಅನುಮತಿ ಕೋರಿ ನಾಗೇಂದ್ರ ಅವರು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ, ವಿಶೇಷ ನ್ಯಾಯಾಲಯವು ಅವರ ಮನವಿಯನ್ನು ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ನಾಗೇಂದ್ರ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಇದೀಗ ಹೈಕೋರ್ಟ್ ರಾಜ್ಯದಿಂದ ಹೊರಹೋಗುವ ನಿರ್ಬಂಧಕ್ಕೆ ತಡೆ ನೀಡಿರುವುದು ನಾಗೇಂದ್ರ ಅವರಿಗೆ ಮಹತ್ವದ ಕಾನೂನು ಪರಿಹಾರವಾಗಿದೆ.
