Crime NewsLatestಬೆಂಗಳೂರು-Bengaluru

ಪ್ರೀತಿ ನಿರಾಕರಿಸಿದ್ದಕ್ಕೆ ಕಾನೂನು ವಿದ್ಯಾರ್ಥಿನಿ ಕೊಂದ ಸಹೋದರರು!

ಬೆಂಗಳೂರು,ಜು.16: ಪ್ರೀತಿ ನಿರಾಕರಿಸಿದ್ದಕ್ಕೆ ಕಾನೂನು ವಿದ್ಯಾರ್ಥಿನಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ ಅಣ್ಣ-ತಮ್ಮನನ್ನು ಜೀವನ್ ಭೀಮಾನಗರ ಪೊಲೀಸರು ಬಂಧಿಸಿದ್ದಾರೆ.

ಖಾಸಗಿ ಕಾಲೇಜಿನಲ್ಲಿ 4ನೇ ವರ್ಷದ ಕಾನೂನು ಪದವಿ ವ್ಯಾಸಂಗ ಮಾಡುತ್ತಿದ್ದ ಅಮೃತಾ ಕೊಲೆಯಾದವರು,ಕೃತ್ಯ ನಡೆಸಿದ ಪ್ರಿಯಕರ ಧನುಷ್ ಹಾಗೂ ಆತನ ಸಹೋದರ ಸೂರ್ಯನನ್ನು ಪೊಲೀಸರು ಬಂಧಿಸಿ ವಿಚಾರಣೆ ಕೈಗೊಂಡಿದ್ದಾರೆ.

ಕಳೆದ ಜು. 13ರಂದು ಅಮೃತಾ ಅವರ ಮೇಲೆ ಚಾಕುವಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದು,ಗಂಭೀರವಾಗಿ ಗಾಯಗೊಂಡು ಮೂರು ದಿನಗಳ ಕಾಲ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಸಾವು ಬದುಕಿನ ಹೋರಾಟ ನಡೆಸಿದ ಆಕೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾಳೆ.

ಹೆಚ್ಎಎಲ್ ಕೋಡಿಚಿಕ್ಕನಹಳ್ಳಿಯಲ್ಲಿ ಕುಟುಂಬದ ಜೊತೆ ವಾಸವಾಗಿದ್ದ ಅಮೃತಾ ಮೂರು ವರ್ಷಗಳ ಹಿಂದೆ ಓಂ ಶಕ್ತಿ ಮಾಲೆ ಹಾಕುವ ವೇಳೆ ಪರಿಚಯವಾಗಿದ್ದ ಧನುಷ್ ಪ್ರೀತಿಸುತ್ತಿದ್ದರು.ಪ್ರೀತಿಸುವ ವೇಳೆ ಧನುಷ್ ತನಗೆ ಈಗಾಗಲೇ ಮದುವೆಯಾಗಿ ವಿಚ್ಛೇದನವಾಗಿದ್ದು, ಒಂದು ಮಗು ಇರುವುದನ್ನು ಮುಚ್ಚಿಟ್ಟಿದ್ದ. ಈ ಸತ್ಯ ತಿಳಿಯುತ್ತಿದ್ದಂತೆ ಅಮೃತಾ ಆತನಿಂದ ದೂರವಾಗಿದ್ದಳು.

ಇದರಿಂದ ಆಕ್ರೋಶಗೊಂಡ ಧನುಷ್‌ನ ತಮ್ಮ ಸೂರ್ಯ, ಅಣ್ಣನ ಪ್ರೀತಿ ನಿರಾಕರಿಸಿದವಳನ್ನು ಬಿಡುವುದಿಲ್ಲ ಎಂದು ಹೇಳಿಕೊಂಡು ಕಳೆದ ಜುಲೈ 13ರಂದು ಸಂಜೆ ಯುವತಿಯ ಮನೆಯ ಬಳಿ ತೆರಳಿ ಗಲಾಟೆ ಮಾಡಿ, ಆಕೆಯ ಬೆನ್ನು ಮತ್ತು ಎದೆಗೆ ಮನಬಂದಂತೆ ಚಾಕುವಿನಿಂದ ಅಟ್ಟಹಾಸ ಮೆರೆದಿದ್ದನು, ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ಅಮೃತಾಳನ್ನು ತಕ್ಷಣವೇ ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದರು.

ಆದರೆ, ಮೂರು ದಿನಗಳ ಕಾಲ ಸಾವು-ಬದುಕಿನ ನಡುವೆ ಹೋರಾಡಿ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ಸಂಜೆ ಆಸ್ಪತ್ರೆಯಲ್ಲಿ ಆಕೆ ಸಾವನ್ನಪ್ಪಿದ್ದರು.ಈ ಸಂಬಂಧ ಪ್ರಕರಣ ದಾಖಲಿಸಿ ಕಾರ್ಯಾಚರಣೆ ಕೈಗೊಂಡ ಜೀವನ್ ಭೀಮಾನಗರ ಪೊಲೀಸರು ಅಣ್ಣ ತಮ್ಮ ಇಬ್ಬರನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

Share with Friends
author avatar
Digital Desk