
ನಾನು ಯಾರ ಪರವೂ ಲಾಬಿ ಮಾಡಲ್ಲ..!
ದೆಹಲಿ,ಜು.16 : ಸಚಿವ ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ನಾನು ಯಾರ ಪರವೂ ಲಾಬಿ ಮಾಡಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಸ್ಪಷ್ಟಪಡಿಸಿದರು.
ದೆಹಲಿಯಲ್ಲಿಂದು ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ವರಿಷ್ಠರೊಡನೆ ಚರ್ಚೆಗೆ ಮುನ್ನ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ನಾನು ದೆಹಲಿಗೆ ಯಾವುದೇ ಪಟ್ಟಿಯನ್ನು ತಂದಿಲ್ಲ. ಪಟ್ಟಿ ಹಿಡಿದುಕೊಂಡು ಓಡಾಡುವ ವ್ಯಕ್ತಿಯೂ ನಾನಲ್ಲ. ಪಕ್ಷದ ಅಧ್ಯಕ್ಷನಾಗಿ ನನಗೆ ಎಲ್ಲಾ ನಾಯಕರು ಸಮಾನರು. ನಾನು ಯಾರ ಪರವಾಗಿಯೂ ಲಾಬಿ ಮಾಡುವುದಿಲ್ಲ ಎಂದರು.
ಸಚಿವ ಸಂಪುಟ ವಿಸ್ತರಣೆಯನ್ನು ಒಂದೇ ಹಂತದಲ್ಲಿ ಮಾಡಬೇಕೇ ಅಥವಾ ಬೇಡವೇ ಎಂಬುದನ್ನು ಹೈಕಮಾಂಡ್ ನಿರ್ಧರಿಸಲಿದೆ. ಪಕ್ಷದಲ್ಲಿ ೫ ಬಾರಿ ಗೆದ್ದಿರುವ ಶಾಸಕರು ಇದ್ದಾರೆ. ಹಾಗೆಯೇ ಹಲವು ಶಾಸಕರಿಗೆ ಈಗಾಗಲೇ ಹಲವು ಬಾರಿ ಸಚಿವರಾಗುವ ಅವಕಾಶವೂ ಸಿಕ್ಕಿದೆ. ಎಲ್ಲವನ್ನೂ ನೋಡಿಕೊಂಡು ಹೈಕಮಾಂಡ್ ಸಚಿವರ ಪಟ್ಟಿಯ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳುತ್ತದೆ ಎಂದರು.
ಪಕ್ಷದ ಹೈಕಮಾಂಡ್ ನಿರ್ಧಿಷ್ಟವಾಗಿ ಯಾರೊಬ್ಬರ ಬಗ್ಗೆ ನನ್ನ ಅಭಿಪ್ರಾಯ ಕೇಳಿದರೆ ಮಾತ್ರ ನಾನು ನನ್ನ ಅನಿಸಿಕೆ ಹಂಚಿಕೊಳ್ಳುತ್ತೇನೆಯೇ ಹೊರತು ಇಂಥವರನ್ನೆ ಸಚಿವರನ್ನಾಗಿಸಿ ಎಂದು ನಾನು ಹೇಳುವುದಿಲ್ಲ. ನನಗೆ ಎಲ್ಲರೂ ಒಂದೇ ಎಂದರು.
ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ಎದುರಿಸಲು ಹಾಗೂ ರಾಜ್ಯದಲ್ಲಿ ಬರ ಪರಿಸ್ಥಿತಿ ಇರುವುದರಿಂದ ಜನರ ಸಂಕಷ್ಟಕ್ಕೆ ಸ್ಪಂದಿಸಲು ಪೂರ್ಣ ಪ್ರಮಾಣದ ಮಂತ್ರಿ ಮಂಡಲದ ಅವಶ್ಯಕತೆ ಇದೆ ಎಂದು ಹೇಳಿದರು.
