2A ಮೀಸಲಾತಿ ಕುರಿತು ಸಿಎಂ ಭೇಟಿಮಾಡಿದ ಪಂಚಮಸಾಲಿ ಸಮುದಾಯದ ನಿಯೋಗ
ಬೆಂಗಳೂರು: ಪಂಚಮಸಾಲಿ ಸಮುದಾಯಕ್ಕೆ 2A ಮೀಸಲಾತಿ ಕುರಿತು ಗೃಹ ಕಚೇರಿ ಕೃಷ್ಣದಲ್ಲಿಂದು ಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದ ನಿಯೋಗ ಸಿಎಂ ಸಿದ್ದರಾಮಯ್ಯ ಜೊತೆ ಒಂದೂವರೆ ಗಂಟೆಗೂ ಹೆಚ್ಚು ಕಾಲ ಸಭೆ ನಡೆಸಿತು.
ಪಂಚಮಸಾಲಿ ಸಮುದಾಯಕ್ಕೆ 2A ಮೀಸಲಾತಿ ಕೊಡುವ ಸಂಬಂಧ ಸರ್ಕಾರದಿಂದ ಯಾವುದೇ ಭರವಸೆ ಸಿಕ್ಕಿಲ್ಲ. ಈ ಹಿನ್ನೆಲೆ ಮತ್ತೆ ಹೋರಾಟ ರೂಪಿಸುವ ಸಂಬಂಧ ಜಯ ಮೃತ್ಯುಂಜಯ ಸ್ವಾಮೀಜಿ ಸುಳಿವು ನೀಡಿದ್ದಾರೆ. ಸಭೆಯಲ್ಲಿ 2A ಮೀಸಲಾತಿ ನೀಡುವ ಸಂಬಂಧ ಯಾವುದೇ ಭರವಸೆ ಜಯ ಮೃತ್ಯುಂಜಯ ಸ್ವಾಮೀಜಿ ನಿಯೋಗಕ್ಕೆ ಸಿಕ್ಕಿಲ್ಲ ಎಂದು ತಿಳಿದುಬಂದಿದೆ.
ಸಭೆ ಬಳಿಕ ಮಾತನಾಡಿದ ಜಯ ಮೃತ್ಯುಂಜಯ ಸ್ವಾಮೀಜಿ, ಸಿಎಂ ಅವರು ನಮ್ಮ ಬಳಿ ಒಂದೂವರೆ ಗಂಟೆ ಸಭೆ ಮಾಡಿದ್ರು. ನಾವು 2A ಮೀಸಲಾತಿ ಕೊಡಿ ಇಲ್ಲದೇ ಹೋದ್ರೆ ಬಿಜೆಪಿ ತಂದಿದ್ದ 2D ಮೀಸಲಾತಿಯಾದ್ರೂ ಕೊಡಿ ಅಂತ ಮನವಿ ಮಾಡಿದ್ವಿ. ಇದಲ್ಲದೇ ಲಿಂಗಾಯತರನ್ನ ಕೇಂದ್ರ ಒಬಿಸಿ ಪಟ್ಟಿಗೆ ಸೇರಿಸುವ ಸಂಬಂಧ ಕೇಂದ್ರಕ್ಕೆ ಶಿಫಾರಸು ಆದ್ರು ಮಾಡಿ ಅಂತ ಮನವಿ ಮಾಡಿದ್ವಿ. ಆದರೆ ಸಿಎಂ ಅವರು ಚುನಾವಣೆ ನೀತಿ ಸಂಹಿತೆ ಇದೆ. ಈಗ ಏನು ಹೇಳೊಲ್ಲ ಅಂತ ಹೇಳಿದ್ದಾರೆ. ಒಬಿಸಿ ಬಗ್ಗೆಯೂ ಭರವಸೆ ಕೊಟ್ಟಿಲ್ಲ. 2A ಮೀಸಲಾತಿ ಬಗ್ಗೆಯೂ ಯಾವುದೇ ಸ್ಪಷ್ಟವಾದ ನಿರ್ಧಾರ ಹೇಳಿಲ್ಲ. ಈ ಸಭೆ ನಮಗೆ ಸಮಾಧಾನ ತಂದಿಲ್ಲ. ಹೀಗಾಗಿ ಮುಂದಿನ ಹೋರಾಟ ರೂಪಿಸೋದಾಗಿ ತಿಳಿಸಿದರು.
