ಸಿಎಂ ಸಿದ್ದರಾಮಯ್ಯನವರು ನನ್ನ ಮಾತು ಕೇಳಿದ್ದರೆ ಈ ಪರಿಸ್ಥಿತಿ ಬರ್ತಿರ್ಲಿಲ್ಲ : ಪ್ರತಾಪ್ ಸಿಂಹ
ಪುತ್ತೂರು: ಮುಡಾ ಹಗರಣಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಶನ್ ಗೆ ಅನುಮತಿ ನೀಡಿದ್ದನ್ನು ಹೈಕೋರ್ಟ್ ಎತ್ತಿಹಿಡಿದಿರುವುದಕ್ಕೆ ಸಂಬಂಧಿಸಿದಂತೆ ಮಾಜಿ ಸಂಸದ ಪ್ರತಾಪ್ ಸಿಂಹ “ಸಿದ್ದರಾಮಯ್ಯ ಅವರಿಗೆ ನಾನು ಅವತ್ತೇ ಗಿಣಿಗೆ ಹೇಳಿದಂತೆ ಹೇಳಿದ್ದೆ. ನಾನು ಹೇಳಿದಂತೆ ಅವರ ಪತ್ನಿಯ ಹೆಸರಲ್ಲಿ ಪಡೆದುಕೊಂಡಿದ್ದ 14 ಸೈಟುಗಳನ್ನು ಹಿಂದುರುಗಿಸಿ ತನಿಖೆಗೆ ಆದೇಶ ಮಾಡಿದ್ದಿದ್ದರೆ ಎಲ್ಲ ಪಕ್ಷಗಳಲ್ಲಿರುವ ಕಳ್ಳರೂ ಸಿಕ್ಕಿಹಾಕಿಕೊಳ್ಳುತ್ತಿದ್ದರು.’’
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ತಕ್ಷಣವೇ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ವಿಚಾರಣೆ ಎದುರಿಸಬೇಕು ಎಂದು ಆಗ್ರಹಿಸಿದರು.
ನೀವು ನಿಮ್ಮ ಪತ್ನಿಯ ಹೆಸರಲ್ಲಿ ಅಕ್ರಮವಾಗಿ ಪಡೆದುಕೊಂಡಿರುವ ಅಕ್ರಮ ಸೈಟ್ ಗಳನ್ನು ಸರಂಡರ್ ಮಾಡಿ ತನಿಖೆಗೆ ಆದೇಶ ಮಾಡಿ ಎಂದು ಗಿಳಿಗೆ ಹೇಳಿದಂತೆ ಹೇಳಿದೆ. ಸಿದ್ದರಾಮಯ್ಯನವರು ಕೇಳಿಸಿಕೊಳ್ಳಲಿಲ್ಲ. ಅವರ ಸುತ್ತಮುತ್ತಲು ಇರುವಂತಹ ತಿಳಿಗೇಡಿಗಳು ಕೊಟ್ಟ ಸಲಹೆಯನ್ನೇ ಅವರು ನಂಬಿ ಕುಳಿತುಕೊಂಡರು.
ಹಾಗಾಗಿ ಅವರಿಗೆ ಇವತ್ತು ಈ ಪರಿಸ್ಥಿತಿ ಬಂದಿದೆ. ಒಂದುವೇಳೆ ಅವತ್ತೇ ಅವರು ಆ 14 ಸೈಟ್ ಗಳನ್ನು ಸರಂಡರ್ ಮಾಡಿದ್ದಿದ್ರೆ ಎಲ್ಲಾ ಪಕ್ಷದಲ್ಲಿರುವ ಎಲ್ಲ ಕಳ್ಳರೂ ಸಿಕ್ಕಿಹಾಕಿಕೊಳ್ಳುತ್ತಿದ್ದರು. ಸಿದ್ದರಾಮಯ್ಯ ಅವರೊಬ್ಬರಿಗೇ ಕಳಂಕ ಅಲ್ಲ, ಎಲ್ಲ ಕಳ್ಳರೂ ಸಿಕ್ಕಿಹಾಕಿಕೊಳ್ಳುತ್ತಿದ್ದರು. ಅವರ ಕುರ್ಚಿಯೂ ಉಳಿದಿರುತ್ತಿತ್ತು. ಕಳಂಕದಿಂದಲೂ ತಪ್ಪಿಸಿಕೊಳ್ಳುತ್ತಿದ್ದರು ಎಂದು ಅಭಿಪ್ರಾಯಪಟ್ಟರು.
ಆದರೆ ಸಿದ್ದರಾಮಯ್ಯನವರಿಗೆ ನಾನು ಹೇಳಿದ ಕಿವಿಮಾತು ಅರ್ಥವಾಗಲಿಲ್ಲ. ಆ 14 ಸೈಟಿಗಾಗಿ ಇವತ್ತು ಮುಖ್ಯಮಂತ್ರಿ ಸ್ಥಾನವನ್ನು ಕಳೆದುಕೊಳ್ಳುವಂತಹ ಪರಿಸ್ಥಿತಿಯನ್ನು ಅವರ ಸ್ವಯಂಕೃತಾಪರಾಧದಿಂದ ನಿರ್ಮಾಣ ಮಾಡಿಕೊಂಡಿದ್ದಾರೆ. ಹಾಗಾಗಿ ಇನ್ನಾದರೂ ವಿಳಂಬ ಮಾಡಬೇಡಿ. ತಕ್ಷಣವೇ ರಾಜೀನಾಮೆ ಕೊಡಿ. ನೀವು ಕುರ್ಚಿಗೆ ಅಂಟಿಕೊಂಡು ಜಾರ್ಖಂಡ್ ನ ಹೇಮಂತ್ ಸೊರೇನ್ ಅಥವಾ ದಿಲ್ಲಿಯ ಅರವಿಂದ್ ಕೇಜ್ರೀವಾಲ್ ಹಾದಿಯನ್ನೂ ಹಿಡಿಯಬಹುದು. ಅವರು ನಿನ್ನೆ ಮೊನ್ನೆ ಬಂದಂತಹ ರಾಜಕಾರಣಿಗಳು. ಅವರಿಗೆ ಯಾವ ಮೌಲ್ಯಯುತ ರಾಜಕಾರಣದ ಹಿನ್ನೆಲೆಯೂ ಇಲ್ಲ.
ಆದರೆ ನಿಮ್ಮನ್ನು ನಾವು ಸೈದ್ಧಾಂತಿಕವಾಗಿ ವಿರೋಧಿಸಿದರೂ ಸಹ ಬಡವರ ಬಗ್ಗೆ ಕಾಳಜಿ ಇಟ್ಟುಕೊಂಡಿರುವ ಒಬ್ಬ ಮೌಲ್ಯಯುತ ರಾಜಕಾರಣಿ ಎಂಬುದನ್ನು ನಾವು ಖಂಡಿತ ಒಪ್ಪಿಕೊಳ್ಳುತ್ತೇವೆ. ಹಾಗಾಗಿ ನೀವು ಹೇಮಂತ್ ಸೊರೇನ್ ಮತ್ತು ಅರವಿಂದ ಕೇಜ್ರೀವಾಲ್ ಅವರಂತಹ ಕಳಪೆ ರಾಜಕಾರಣಿಗಳನ್ನು ನೀವು ಅನುಸರಿಸಬೇಡಿ. ಇನ್ನೂ ನಿಮ್ಮಲ್ಲಿ ಮೌಲ್ಯಯುತ ರಾಜಕಾರಣ ಇದೆ ಎಂಬುದನ್ನು ಸಾಬೀತುಪಡಿಸಲು ತಕ್ಷಣಕ್ಕೆ ರಾಜೀನಾಮೆ ನೀಡಿ ವಿಚಾರಣೆಯನ್ನು ಎದುರಿಸಿ. ಸರ್ಕಾರದ ಯಾವುದೇ ಒಂದು ಏಜೆನ್ಸಿ ಮುಖಾಂತರವೇ ತನಿಖೆ ನಡೆಯುತ್ತದೆ.
ಆದಷ್ಟು ಬೇಗ ತನಿಖೆ ಮುಗಿಸಿ ನೀವು ಕಳಂಕಿತರಲ್ಲ ಎಂದು ಸಾಬೀತಾದಲ್ಲಿ ಮತ್ತೆ ಸಿಎಂ ಆಗಬಹುದು. ಆದರೆ ಇವತ್ತು ನೀವು ಚೇರಿಗೆ ಅಂಟಿಕೊಂಡರೆ ನಿಮ್ಮ 45 ವರ್ಷಗಳ ರಾಜಕೀಯ ಜೀವನ ಏನಿದೆ ಅದು ಕಳಂಕದೊಂದಿಗೆ ಅಂತ್ಯವಾಗುತ್ತದೆ. ಹಾಗಾಗಿ ಅಂತಹ ಕಳಂಕಯುತ ಅಂತ್ಯಕ್ಕೆ ನೀವು ದಾರಿ ಮಾಡಿಕೊಡಬೇಡಿ ಎಂದು ನಾನು ನಿಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇನೆ ಎಂದರು.
ಸುಪ್ರೀಂ ಕೋರ್ಟಿಗೆ ಕೂಡ ನೀವು ಹೋಗಬಹುದು. ಅಲ್ಲೂ ಒಂದಿಷ್ಟು ದಿನ ಕೇಸನ್ನು ನಡೆಸಬಹುದು. ಆದರೆ ನೈತಿಕವಾಗಿ ನೀವು ತೆಗಂದುಕೊಂಡಿರುವುದು ತಪ್ಪು ಎಂದು ನಿಮಗೆ ಗೊತ್ತಿದೆ. ಅಕ್ರಮವಾಗಿ 14 ಸೈಟ್ ಗಳನ್ನು ಪಡೆದುಕೊಂಡಿರುವುದು ತಪ್ಪು ಎಂಬುದು ನಿಮಗೆ ಗೊತ್ತಿದೆ ಅಲ್ವಾ? ಈಗಲಾದರೂ ನಿಮ್ಮ ಅಂತರಾತ್ಮದ ಮಾತು ಕೇಳಿ ಹೈಕೋರ್ಟ್ ನೀಡಿರುವ ತೀರ್ಪಿಗೆ ತಲೆಬಾಗಿ ರಾಜೀನಾಮೆ ಕೊಡಿ ಎಂದು ಕೇಳಿಕೊಳ್ಳುವೆ ಎಂದರು.
ರಾಜಕಾರಣದಲ್ಲಿ ಯಾವಾಗಲೂ ಶತ್ರುಗಳು ಅಕ್ಕಪಕ್ಕದಲ್ಲೇ ಇರುತ್ತಾರೆ. ಒಬ್ಬ ಸಂಸದನಾಗಿದ್ದ ನನಗೂ ಇದು ಅನುಭವಕ್ಕೆ ಬಂದಿದೆ. ಸಿದ್ದರಾಮಯ್ಯ ಅವರ ಶತ್ರುಗಳ ಬಿಜೆಪಿಯೋ , ಜಿಡಿಎಸ್ ನಲ್ಲೋ ಇಲ್ಲ. ಕಾಂಗ್ರೆಸ್ ನಲ್ಲೇ ಇದ್ದಾರೆ. ಹಾಗಾಗಿ ಆ ಶತ್ರುಗಳ ಮಾತನ್ನು ಕೇಳಲು ಹೋಗಬೇಡಿ. ನಿಮ್ಮ ಪಕ್ಕದಲ್ಲಿ, ನಿಮ್ಮ ಜೊತೆ ಇರುತ್ತೇವೆ ಎಂದು ಯಾರು ಯಾರು ಹೇಳ್ತಾರೋ ಅವರನ್ನು ಯಾರನ್ನೂ ನಂಬಬೇಡಿ ಎಂದರು.
